ಚಿತ್ತವಾಡ್ಗಿ ಪೊಲೀಸ್ ಠಾಣೆ, ಅದರ ಸಮೀಪದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಸಂಪೂರ್ಣ ಜಲಾವೃತವಾಗಿದ್ದು, ಎರಡೂ ಕಚೇರಿಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ. ಎಸ್.ಆರ್. ನಗರ, ಚಿತ್ತವಾಡ್ಗಿ, ಇಂದಿರಾ ನಗರ, ಶಾಂತಿ ನಗರ, ಸಿದ್ದಲಿಂಗಪ್ಪ ಚೌಕಿ, ಚಪ್ಪರದಹಳ್ಳಿಯಲ್ಲಿ ಅನೇಕ ಮನೆಗಳಿಗೆ ನೀರು ನುಗ್ಗಿರುವುದರಿಂದ ಜನ ತೀವ್ರ ತೊಂದರೆ ಅನುಭವಿಸಿದರು. ಸಿದ್ದಲಿಂಗಪ್ಪ ಚೌಕಿ, ಇಂದಿರಾ ನಗರದಲ್ಲಿ ಅಗ್ನಿಶಾಮಕ ದಳದವರು ಬಂದು ನೀರು ಹೊರ ಹಾಕಿದರು. ಜನ ಬಿಂದಿಗೆಗಳಲ್ಲಿ ನೀರು ತುಂಬಿ ಹೊರ ಚೆಲ್ಲಿದರು. ಸಿಡಿಲಿಗೆ ಸಿದ್ದಲಿಂಗಪ್ಪ ಚೌಕಿಯಲ್ಲಿ ಜಾಲಿ ಮರವೊಂದು ಎರಡು ಹೊಳಾಗಿದೆ. ಕಂಬವೊಂದು ನೆಲಕ್ಕುರುಳಿದೆ. ಪಟೇಲ್ ನಗರದ ಮೂರನೇ ಅಡ್ಡರಸ್ತೆಯಲ್ಲಿ ಬುಡಸಮೇತ ಮರವೊಂದು ನೆಲಕ್ಕುರುಳಿದ್ದರಿಂದ ಸಂಚಾರ ಸ್ಥಗಿತಗೊಂಡಿತ್ತು. ನಗರದ ಬಾಲಕಿಯರ ಶಾಲೆ ಹಿಂಭಾಗದ ಗೋಡೆ ಕೂಡ ಕುಸಿದು ಬಿದ್ದಿದೆ.