ಹೊಸಪೇಟೆ (ವಿಜಯನಗರ): ‘ಸರ್ಕಾರ ಅನುದಾನ ಕೊಟ್ಟರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎ.ಪಿ.ಎಂ.ಸಿ.) ಪ್ರಾಂಗಣದಲ್ಲಿ ಸುಸಜ್ಜಿತವಾದ ಹರಾಜು ಕಟ್ಟೆ ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಲಾಗುವುದು’ ಎಂದು ಎ.ಪಿ.ಎಂ.ಸಿ. ಕಾರ್ಯದರ್ಶಿ ವೀರಣ್ಣ ಎ.ಕೆ ತಿಳಿಸಿದ್ದಾರೆ.
ಎ.ಪಿ.ಎಂ.ಸಿ. ಆರ್ಥಿಕವಾಗಿ ಸದೃಢವಾಗಿಲ್ಲ. ಸರ್ಕಾರ ಮನಸ್ಸು ಮಾಡಿ ಅನುದಾನ ಒದಗಿಸಿದರೆ ರಸ್ತೆ ಸೇರಿದಂತೆ ಇತರೆ ಅಗತ್ಯ ಸೌಕರ್ಯ ಕಲ್ಪಿಸಲಾಗುವುದು. ಈ ಹಿಂದೆ ಮಾರುಕಟ್ಟೆಯ ಸ್ವಚ್ಛತೆಗೆ ಎಂಟು ಜನ ಸಿಬ್ಬಂದಿ ಇದ್ದರು. ಆದಾಯ ತಗ್ಗಿರುವುದರಿಂದ ಈಗ ಮೂವರನ್ನು ನೇಮಿಸಿಕೊಂಡು ಸ್ವಚ್ಛತಾ ಕೆಲಸ ನಿರ್ವಹಿಸಲಾಗುತ್ತಿದೆ. ಸ್ವಚ್ಛತೆಯ ಜವಾಬ್ದಾರಿ ನಗರಸಭೆಗೆ ವಹಿಸಿದರೆ ಉತ್ತಮ ಎಂದು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿದೆ. ಆದರೆ, ರೈತರು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಲಭ ಶೌಚಾಲಯ ನಿರ್ಮಿಸಿ ಅನುಕೂಲ ಮಾಡಿಕೊಡಲಾಗಿದೆ. ರೈತರು ಅವರ ಉತ್ಪನ್ನಗಳನ್ನು ಹರಾಜಿನ ಮೂಲಕ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.