ಹರಪನಹಳ್ಳಿ : ‘ಮುತ್ತಿನ ಸದರಿಗೆ ಹಂಬಲದ ಅರಗಿಣಿ ಕೂತಿತಲೇ ಪರಾಕ್’ ಇದು ಪಟ್ಟಣಕ್ಕೆ ಸಮೀಪದ ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೊರವಪ್ಪ ನುಡಿದ ಕಾರ್ಣಿಕ ನುಡಿ.
ಮೈಲಾರ ಲಿಂಗೇಶ್ವರ ದೇವಸ್ಥಾನದ ಕೋಟೆಪ್ಪ ಬಿಲ್ಲನ್ನೇರಿ ಕಾರ್ಣಿಕ ನುಡಿದು ಕೆಳಗೆ ಬೀಳುತ್ತಿದ್ದಂತೆಯೇ ಭಕ್ತರು ಅವರನ್ನು ಎತ್ತಿ ಹಿಡಿದು ‘ಏಳು ಕೋಟಿ ಏಳು ಕೋಟಿ’ ಎಂದು ಉದ್ಘೋಷ ಮೊಳಗಿಸಿದರು. ಬಳಿಕ ಗೊರವಪ್ಪಗಳ ಸಮ್ಮುಖದಲ್ಲಿ ಸಾಂಪ್ರದಾಯಿಕ ಸರಪಳಿ ಪವಾಡ ಜರುಗಿತು.
ಧರ್ಮದರ್ಶಿಗಳಾದ ದತ್ತಾತ್ರೇಯ ಪ್ರತಿಗಾರ, ಮಾರ್ತಂಡರಾವ್, ನಾಗೇಶ್ವರ ರಾವ್, ಪುರಸಭೆ ಸದಸ್ಯ ಕಿರಣ್, ಪೈಲ್ವಾನ್ ಗಣೇಶ, ಮುಖಂಡ ಕೆಂಚಪ್ಪ, ನವೀನ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಧರ್ಮದರ್ಶಿ ದತ್ತಾತ್ರೇಯ ಭಟ್ ಮಾತನಾಡಿ, ಇತಿಹಾಸ ಪ್ರಸಿದ್ದ ಹರಪನಹಳ್ಳಿ ದೊಡ್ಡಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಕ್ಕೆ ಎರಡು ಬಾರಿ ಕಾರ್ಣಿಕ ನಡೆಯುತ್ತದೆ. ಈಗ ನಡೆದಿರುವುದು ರಾಜಕಾರಣಕ್ಕೆ ಸಂಬಂಧಿಸಿದ್ದು. ‘ಲೋಕಸಭೆ ಚುನಾವಣೆಯಲ್ಲಿ ಜನಪರವಾಗಿರುವ ವ್ಯಕ್ತಿ ಅಧಿಕಾರಕ್ಕೆ ಗದ್ದುಗೆ ಹಿಡಿಯುತ್ತಾರೆ’ ಎಂದು ವಿಶ್ಲೇಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.