ಹೊಸಪೇಟೆ: ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ಎಲ್ಲ ನಿಲ್ದಾಣಗಳಿಂದ ಸೋಮವಾರ ಬಸ್ ಸಂಚಾರ ಆರಂಭಗೊಂಡಿದೆ.
ಬೆಳಿಗ್ಗೆ ಆರು ಗಂಟೆಯಿಂದಲೇ ಬಸ್ ಓಡಾಟ ಆರಂಭಗೊಂಡಿದೆ. ಆದರೆ, ಹೆಚ್ಚಿನ ಪ್ರಯಾಣಿಕರು ಕಂಡು ಬರಲಿಲ್ಲ. ಸರ್ಕಾರಿ ಕಚೇರಿಗಳು ಆರಂಭಗೊಂಡಿರುವುದರಿಂದ ದೈನಂದಿನ ಕೆಲಸಕ್ಕೆ ಹೋಗುವವರು ನಿಲ್ದಾಣಕ್ಕೆ ಬಂದು ಬಸ್ ಗಳ ಮೂಲಕ ತೆರಳಿದರು.
ಬಸ್ಸುಗಳಲ್ಲಿ ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ನೋಡಿಕೊಂಡು ಆಯಾ ಊರುಗಳಿಗೆ ಬಸ್ ಬಿಡಲಾಗುತ್ತಿದೆ. ಶೇ 50ರಷ್ಟು ಪ್ರಯಾಣಿಕರು ಬರುವವರೆಗೆ ಕಾಯುತ್ತಿರುವುದರಿಂದ ನಿಗದಿತ ಸಮಯಕ್ಕೆ ಬಸ್ ಗಳು ಸಂಚರಿಸುತ್ತಿಲ್ಲ.
ಕೊರೊನಾ ಮೊದಲ ಅಲೆ ಬಂದಾಗ ಪ್ರತಿಯೊಬ್ಬ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ನಡೆಸಿ, ಅವರ ದಾಖಲಿಸಿದ ನಂತರ ಬಸ್ಸಿನೊಳಗೆ ಬಿಡಲಾಗುತ್ತಿತ್ತು. ಈಗ ಅದ್ಯಾವುದೂ ಮಾಡುತ್ತಿಲ್ಲ. ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯಗೊಳಿಸಲಾಗಿದೆ.