ಹೊಸಪೇಟೆ (ವಿಜಯನಗರ): ನಗರದ ಅನಂತಶಯನಗುಡಿಯಲ್ಲಿ ಮಾಡಿರುವ ಒತ್ತುವರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಮಡಿವಾಳ ಸಮಾಜದ ಮಲ್ಲಿಕಾರ್ಜುನ ಸ್ವಾಮಿ ವಿರಕ್ತ ಮಠ ಟ್ರಸ್ಟ್ನವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕೆಲಸಮಯ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಅಲ್ಲಿಂದ ತಹಶೀಲ್ದಾರ್ ಕಚೇರಿ ವರೆಗೆ ರ್ಯಾಲಿ ನಡೆಸಿದರು. ಅನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಅನಂತಶಯನಗುಡಿ ಸರ್ವೇ ನಂಬರ್ 126ಬಿಯಲ್ಲಿ 1.05 ಎಕರೆ ಮತ್ತು ಸರ್ವೇ ನಂಬರ್ 24ಸಿ/1ರಲ್ಲಿ 1.32 ಎಕರೆ ಜಮೀನು ಮಡಿವಾಳ ಸಮಾಜದ ಮಲ್ಲಿಕಾರ್ಜುನ ಸ್ವಾಮಿ ವಿರಕ್ತ ಮಠ ಟ್ರಸ್ಟ್ ಆಸ್ತಿಯನ್ನು ಒತ್ತುವರಿ ಮಾಡಲಾಗಿದ್ದು, ಕೂಡಲೇ ಅದನ್ನು ತೆರವುಗೊಳಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಟ್ರಸ್ಟ್ನ ಮುಖಂಡರಾದ ಹನುಮಂತಪ್ಪ, ಎ.ಎಚ್.ಹುಬಗಕ್ಕ, ಎ.ಎಚ್. ಪರಶುರಾಮ, ಪ್ರಹ್ಲಾದ ಸ್ವಾಮಿ, ದೇವೇಂದ್ರಪ್ಪ, ಎಂ. ರಾಘವೇಂದ್ರ, ಎ. ಪರಸಪ್ಪ, ಎ. ಸಂತೋಷ್, ಎ. ರಮೇಶ್, ಆನಂದ್ ಕುಮಾರ್, ಭೀಮಪ್ಪ, ವೀರೇಶ ಇದ್ದರು.