ಹೊಸಪೇಟೆ (ವಿಜಯನಗರ): ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಭಾನುವಾರ ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ (ಹಂಪಿ ಜೂ) ಭೇಟಿ ನೀಡಿದರು.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಮಾಜಿಸಂಸದೆ ಜೆ. ಶಾಂತಾ ಅವರೊಂದಿಗೆ ಉದ್ಯಾನಕ್ಕೆ ಬಂದ ಶ್ರೀರಾಮುಲು ಅವರು ಪ್ಲಾಜಾ, ಕೆಫೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್ ಕುಮಾರ್ ಅವರಿಂದ ಮಾಹಿತಿ ಪಡೆದರು.
ಹುಲಿ, ಸಿಂಹ ಸಫಾರಿ ನೋಡಿದರು. ಪ್ರಿಯದರ್ಶಿನಿ ಜಿಂಕೆ ಉದ್ಯಾನ, ಮೃಗಾಲಯಕ್ಕೆ ಭೇಟಿ ನೀಡಿ, ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಂಡರು. ‘ಉದ್ಯಾನದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇದರ ಏಳಿಗೆಗೆ ಬೇಕಾದ ಅಗತ್ಯ ನೆರವು ಕಲ್ಪಿಸಲಾಗುವುದು’ ಎಂದು ಶ್ರೀರಾಮುಲು ಹೇಳಿದರು.
ಬಳಿಕ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರು ಕೊಪ್ಪಳ ತಾಲ್ಲೂಕಿನ ಗಂಗಾವತಿ ಸಮೀಪದ ಪಂಪಾವನಕ್ಕೆ ತೆರಳಿದರು.