ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ (ಎಸ್ಸಿ/ಎಸ್ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ’ ಎಂದು ಮಡಿವಾಳ ಸಮಾಜದ ಮುಖಂಡ, ವಕೀಲ ಮರಿಯಪ್ಪ ಹೇಳಿದರು.
ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಅಟ್ರಾಸಿಟಿ ಕಾಯ್ದೆ ಇದೆ. ಅದು ಮುಂದುವರೆಯಬೇಕು. ಆದರೆ, ಅದನ್ನು ದುರ್ಬಳಕೆ ಮಾಡಿಕೊಂಡು ಯಾರ ವಿರುದ್ಧವೂ ಸುಳ್ಳು ಪ್ರಕರಣ ದಾಖಲಿಸಬಾರದು. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಮಡಿವಾಳ ಸಮಾಜದ ಟ್ರಸ್ಟ್ ಹೆಸರಿನ ಜಮೀನಿಗೆ ಸಂಬಂಧಿಸಿದಂತೆ ಪ್ರಶ್ನಿಸಿದರೆ ಡಿ. ಪೋಲಪ್ಪ ಎಂಬುವರು ಅದರ ಮೊರೆ ಹೋಗುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಚಿವ ಆನಂದ್ ಸಿಂಗ್ ಅವರು ಮಡಿವಾಳ ಸಮಾಜದ ಕೋರಿಕೆಯ ಮೇರೆಗೆ ಜಮೀನಿನ ರಾಜಿ ಪಂಚಾಯಿತಿಗೆ ಆ. 30ರಂದು ಪೋಲಪ್ಪ ಅವರ ಮನೆ ಸಮೀಪ ಬಂದಿದ್ದರು. ಆದರೆ, ಅವರ ವಿರುದ್ಧವೇ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ. ಅವರು ಜಾತಿ ರಾಜಕಾರಣ ಮಾಡುವವರಲ್ಲ ಎಂದರು.
ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಎಚ್. ಸೋಮಶೇಖರ್ ಮಾತನಾಡಿ, ‘ಸಚಿವ ಆನಂದ್ ಸಿಂಗ್ ಅವರು ಯಾರ ಒಂದು ಇಂಚೂ ಜಾಗವೂ ಕಬಳಿಸಿಲ್ಲ. ಆದರೆ, ಕಾಂಗ್ರೆಸ್ ಮುಖಂಡ ರಾಜಶೇಖರ್ ಹಿಟ್ನಾಳ್ ಅವರು ಆನಂದ್ ಸಿಂಗ್ ರಾಜ ಕಾಲುವೆ ಮೇಲೆ ಮನೆ ಕಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಆರೋಪ ಮಾಡುವುದಕ್ಕೂ ಮೊದಲು ಸತ್ಯ ತಿಳಿದು ಮಾತಾಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.