ಹೊಸಪೇಟೆ (ವಿಜಯನಗರ): ನಗರದ ತುಂಗಭದ್ರಾ ಜಲಾಶಯ ಸಮೀಪದ ರೈಲು ಹಳಿ ಬಳಿ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಮೃತರನ್ನು ಟಿ.ಬಿ. ಡ್ಯಾಂ ಪಿಎಲ್ ಸಿ ನಿವಾಸಿ ಮೈಕಲ್ ಜಾನ್ (40) ಎಂದು ಗುರುತಿಸಲಾಗಿದೆ.
'ಜಾನ್ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ರೈಲು ಹಳಿ ಬಳಿ ಬಿಸಾಕಿ ಹೋಗಿರುವ ಸಾಧ್ಯತೆ ಇದೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಭಾನುವಾರ ಬೆಳಕಿಗೆ ಬಂದಿದೆ. ಕೊಲೆಗೆ ಇನ್ನಷ್ಟೇ ಕಾರಣ ಗೊತ್ತಾಗಬೇಕಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದು ಟಿ.ಬಿ. ಡ್ಯಾಂ ಸಿಪಿಐ ಎ. ನಾರಾಯಣ ಪ್ರಜಾವಾಣಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ನಗರದ ನ್ಯಾಯಾಲಯದ ಆವರಣದಲ್ಲಿ ವಕೀಲರೊಬ್ಬರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ಘಟನೆಯ ನೆನಪು ಮಾಸುವ ಮುನ್ನವೇ ಮತ್ತೊಂದು ಕೊಲೆ ನಡೆದಿದೆ.