ಹೊಸಪೇಟೆ (ವಿಜಯನಗರ): ಬಳ್ಳಾರಿ, ಶಿರಸಿ ನಂತರ ವಿಜಯನಗರ ಜಿಲ್ಲೆಯಲ್ಲೂ ಪ್ರತಿ ಲೀಟರ್ ಪೆಟ್ರೋಲ್ ದರ ಶತಕದ ಗಡಿ ದಾಟಿದೆ.
ಬುಧವಾರ ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹100.01ಕ್ಕೆ ಏರಿಕೆಯಾಗಿದೆ. ಮಂಗಳವಾರ ₹99.78 ಇತ್ತು. ಡೀಸೆಲ್ ದರ ₹92.30 ಇದೆ.
ಕೋವಿಡ್ ಸಂಕಷ್ಟದಲ್ಲೂ ಸತತವಾಗಿ ತೈಲ ದರ ಹೆಚ್ಚುತ್ತಿರುವುದಕ್ಕೆ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿದೆ.
'ದುಡಿಮೆ ಇಲ್ಲದೆ ಜನ ಮನೆಯಲ್ಲಿ ಕುಳಿತಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ತೈಲ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ' ಎಂದು ಆಟೊ ಯೂನಿಯನ್ ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
'ಸರ್ಕಾರ ಮನಸ್ಸು ಮಾಡಿದರೆ ತೈಲ ದರ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಆದರೆ, ಅದಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಜನಸಾಮಾನ್ಯರಿಗಿಂತ ಕಾರ್ಪೊರೇಟ್ನವರ ಹಿತ ಕಾಯುವುದೇ ಮುಖ್ಯವಾಗಿದೆ' ಎಂದು ಸಾಮಾಜಿಕ ಕಾರ್ಯಕರ್ತೆ ನಾಗರತ್ನಮ್ಮ ಟೀಕಿಸಿದ್ದಾರೆ.