ಹೊಸಪೇಟೆ (ವಿಜಯನಗರ): ಇಲ್ಲಿನ ಡಾ.ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಧ್ಯಾಹ್ನ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ಬಹಿರಂಗ ಸಮಾವೇಶಕ್ಕೆ ಜನಸಾಗರವೇ ಹರಿದು ಬರುತ್ತಿದೆ.
ನವ ಕರ್ನಾಟಕ ಸಂಕಲ್ಪ ಸಮಾವೇಶಕ್ಕೆ
ವಿಜಯನಗರದ ಐದು ಹಾಗೂ ಕೊಪ್ಪಳ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಕಾರ್ಯಕರ್ತರನ್ನು ಸೇರಿಸಲು ಬಿಜೆಪಿ ಯೋಜಿಸಿದೆ. ಬೆಳಿಗ್ಗೆ ಹತ್ತು ಗಂಟೆಯಿಂದ ಕಾರ್ಯಕರ್ತರು ಹೊಸಪೇಟೆಗೆ ಮುಖ ಮಾಡಿದ್ದಾರೆ. ಬಿಜೆಪಿ ಚಿಹ್ನೆಯಿರುವ ಟೋಪಿ ಹಾಗೂ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತ ಕಾರ್ಯಕ್ರಮದ ಸ್ಥಳಕ್ಕೆ ಬರುತ್ತಿದ್ದಾರೆ.
80 ಸಾವಿರ ಕುರ್ಚಿಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಬಹುತೇಕ ಆಸನಗಳು ಭರ್ತಿಯಾಗಿವೆ. ಪ್ರತಿಯೊಬ್ಬರನ್ನೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿ ಕಾರ್ಯಕ್ರಮದ ಸ್ಥಳಕ್ಕೆ ಬಿಡುತ್ತಿದ್ದಾರೆ. ಜಿಲ್ಲಾ ಕ್ರೀಡಾಂಗಣ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರ ಸಂಜೆವರೆಗೆ ನಿರ್ಬಂಧಿಸಲಾಗಿದೆ.
ಇನ್ನಷ್ಟೇ ಮೋದಿಯವರು ವೇದಿಕೆಗೆ ಬರಬೇಕಿದ್ದು ಸ್ಥಳೀಯ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಸಂಸದರಾದ ಕರಡಿ ಸಂಗಣ್ಣ, ವೈ. ದೇವೇಂದ್ರಪ್ಪ, ಸಚಿವರಾದ ಹಾಲಪ್ಪ ಆಚಾರ್, ಆನಂದ್ ಸಿಂಗ್, ಶಾಸಕರಾದ ಕರುಣಾಕರರೆಡ್ಡಿ, ಪರಣ್ಣ ಮುನವಳ್ಳಿ, ಅಭ್ಯರ್ಥಿ ಗಳಾದ
ಲೋಕೇಶ್ ನಾಯಕ, ಸಿದ್ದಾರ್ಥ ಸಿಂಗ್, ಕೃಷ್ಣ ನಾಯ್ಕ, ಬಲ್ಲಾಹುಣ್ಸಿ ರಾಮಣ್ಣ, ಮಂಜುಳಾ ಕರಡಿ, ಎಂಎಲ್ ಸಿ ಹೇಮಲತಾ ನಾಯಕ, ಜಿಲ್ಲಾಧ್ಯಕ್ಷ
ಚನ್ನಬಸವನಗೌಡ ಪಾಟೀಲ, ವಿಭಾಗೀಯ ಪ್ರಭಾರಿ, ಗೋ. ಮಧುಸೂದನ್, ಗಿರೇಗೌಡ, ಪ್ರಭುದೇವ ಇತರರಿದ್ದಾರೆ.