ಹೊಸಪೇಟೆ (ವಿಜಯನಗರ): ಧಾರವಾಡದ ಹೊನ್ನೂರು ಗ್ರಾಮದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿರುವ ಘಟನೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಸೇನೆ, ಅಖಿಲ ಕರ್ನಾಟಕ ಕುರುಬರ ಒಕ್ಕೂಟ, ಪ್ರದೇಶ ಯುವ ಕುರುಬರ ಸಂಘ ಹಾಗೂ ತಾಲ್ಲೂಕು ಕುರುಬರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಮುಖಂಡ ದಾಸನಾಳ್ ಹನುಮಂತಪ್ಪ ಮಾತನಾಡಿ, ಕುರಿಗಾಹಿ ಮಹಿಳೆಯನ್ನು ಕುಂದಗೋಳದ ಯರಗುಪ್ಪಿ ಬಳಿ ಅತ್ಯಾಚಾರ ಎಸಗಲಾಗಿದ್ದು, ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸಂತ್ರಸ್ತೆಯ ಕುಟುಂಬಕ್ಕೆ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿದರು.