ಹೊಸಪೇಟೆ (ವಿಜಯನಗರ): ‘ವಿ ಮೇತನ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್’ನಿಂದ ಇತ್ತೀಚೆಗೆ ಹಂಪಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ತಾಲ್ಲೂಕಿನ ಕಮಲಾಪುರದ ಎಸ್.ಎಸ್. ರಾಚಯ್ಯ ಅವರು ತೆಗೆದಿರುವ ಛಾಯಾಚಿತ್ರ ಪ್ರಥಮ ಬಹುಮಾನ ಬಂದಿದೆ.
ಹಂಪಿಯ ಬಡವಿಲಿಂಗಕ್ಕೆ ಅರ್ಚಕ ರಾಘವ ಭಟ್ ಅವರು ಪುಷ್ಪಾರ್ಚನೆ ಮಾಡುತ್ತಿರುವ ಚಿತ್ರವನ್ನು ರಾಚಯ್ಯ ತೆಗೆದಿದ್ದರು. ಆಯ್ಕೆ ಸಮಿತಿಯು ಮೊದಲ ಬಹುಮಾನಕ್ಕೆ ಇದನ್ನು ಆಯ್ಕೆ ಮಾಡಿದೆ. ₹51 ಸಾವಿರ ನಗದು, ಪ್ರಶಸ್ತಿ ಪತ್ರ ಒಳಗೊಂಡಿದೆ.
ಅಂಕೂರ್ ತಾಂಬ್ಡೆ ಹಾಗೂ ರಾಹುಲ್ ಗೋಡ್ಸೆ ಅವರ ಚಿತ್ರಗಳು ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. ದ್ವಿತೀಯ ಬಹುಮಾನ ₹24 ಸಾವಿರ ನಗದು, ತೃತೀಯ ಬಹುಮಾನ ₹12 ಸಾವಿರ ನಗದು, ನಾಲ್ಕರಿಂದ 9ನೇ ಸ್ಥಾನ ಪಡೆದವರಿಗೆ ತಲಾ ₹3 ಸಾವಿರ ನಗದು ಬಹುಮಾನ ಇದೆ.
ಜುಲೈ 23ರಂದು ಹಂಪಿಯಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ‘ಲ್ಯಾಂಡ್ಸ್ಕೇಪ್’ ಮತ್ತು ಹಂಪಿ ಸ್ಮಾರಕಗಳ ಛಾಯಾಚಿತ್ರಗಳನ್ನು ಸೆರೆಹಿಡಿದು ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ರಾಜ್ಯಗಳ 114 ಸ್ಪರ್ಧಿಗಳು ಪಾಲ್ಗೊಂಡಿದ್ದರು ಎಂದು ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟೇಶ್ ಮೇತನ್ ತಿಳಿಸಿದ್ದಾರೆ.