ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿ ಗುಡುಗು, ಮಿಂಚಿನೊಂದಿಗೆ ಬಿರುಸು ಮಳೆಯಾಯಿತು.
ಸಂಜೆ ಏಳು ಗಂಟೆಗೆ ಜೋರು ಗಾಳಿ ಬೀಸಲು ಆರಂಭಿಸಿತು. ಬಳಿಕ ಭಾರಿ ಗುಡುಗು, ಮಿಂಚಿನೊಂದಿಗೆ ಆರಂಭಗೊಂಡ ಬಿರುಸು ಮಳೆ ಸತತವಾಗಿ ಸುರಿಯಿತು. ರಾತ್ರಿ ಒಂಬತ್ತು ಗಂಟೆಯ ನಂತರವೂ ಮಳೆ ಮುಂದುವರೆದಿತ್ತು. ಮಳೆಯ ನಡುವೆ ಭಾರಿ ಗುಡುಗು, ಸಿಡಿಲಿನ ಸದ್ದು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತು.
ಭಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹರಿಯುತ್ತಿತ್ತು. ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಇಡೀ ನಗರ ಅಂಧಕಾರದಲ್ಲಿ ಮುಳುಗಿತ್ತು. ಕರ್ಫ್ಯೂ ಹಿನ್ನೆಲೆಯಲ್ಲಿ ಪೊಲೀಸರು ಮಳೆಯಲ್ಲೇ ಗಸ್ತು ತಿರುಗಿದರು. ಮನೆಗಳಿಂದ ಹೊರಬರದಂತೆ ಧ್ವನಿವರ್ಧಕಗಳ ಮೂಲಕ ತಿಳಿಸಿದರು.
ತಾಲ್ಲೂಕಿನ ಹೊಸೂರು, ನಾಗೇನಹಳ್ಳಿ, ಬಸವನದುರ್ಗ, ಧರ್ಮದಗುಡ್ಡ, ಇಪ್ಪಿತ್ತೇರಿ ಮಾಗಾಣಿ, ವ್ಯಾಸನಕೆರೆ, ಸಂಕ್ಲಾಪುರ, ಕಾರಿಗನೂರು, ಕೊಂಡನಾಯಕನಹಳ್ಳಿ, ಮಲಪನಗುಡಿ, ಹಂಪಿ, ಕಮಲಾಪುರ ಸೇರಿದಂತೆ ಹಲವೆಡೆ ಬಿರುಸು ಮಳೆಯಾಗಿರುವುದು ವರದಿಯಾಗಿದೆ.
ಶುಕ್ರವಾರ ನಸುಕಿನ ಜಾವ ಅರ್ಧ ಗಂಟೆಗೂ ಹೆಚ್ಚು ಸಮಯ ಮಳೆಯಾಗಿತ್ತು. ಬೇಸಿಗೆ ಆರಂಭಗೊಂಡ ನಂತರ ಮೊದಲ ಸಲ ಉತ್ತಮ ಮಳೆಯಾಗಿರುವುದರಿಂದ ತಾಪಮಾನ ಭಾರಿ ಕುಸಿತ ಕಂಡಿದೆ. ಸೆಕೆ, ಬಿಸಿಗಾಳಿಯಿಂದ ಬಳಲುತ್ತಿದ್ದ ಜನರಿಗೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.