ಹೊಸಪೇಟೆ (ವಿಜಯನಗರ): ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಗುರುವಾರ ಸಂಜೆ ಭಾರಿ ಬಿರುಗಾಳಿ ಮಳೆಯಾಗಿದೆ.
ಸಂಜೆ ಏಳು ಗಂಟೆಯಿಂದಲೇ ಭಾರಿ ಬಿರುಗಾಳಿ ಬೀಸಲು ಆರಂಭಿಸಿತು. ಬಳಿಕ ಬಿರುಗಾಳಿಯೊಂದಿಗೆ ಜೋರು ಮಳೆ ಪ್ರಾರಂಭವಾಯಿತು. 7.30ಕ್ಕೆ ಆರಂಭಗೊಂಡ ಮಳೆ ಎಡೆಬಿಡದೇ ರಾತ್ರಿ 9 ಗಂಟೆಯ ವರೆಗೆ ಸುರಿಯಿತು. ಈ ಮಧ್ಯೆ ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದರಿಂದ ಇಡೀ ನಗರ ಅಂಧಕಾರದಲ್ಲಿ ಮುಳುಗಿತು.
ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದರಿಂದ ಎಲ್ಲೆಡೆ ವಾತಾವರಣ ಸಂಪೂರ್ಣ ತಂಪಾಗಿದೆ. 40 ಡಿಗ್ರಿ ಸೆಲ್ಸಿಯಸ್ ತಾಪಮಾನ, ಬಿಸಿಲ ಝಳದಿಂದ ರೋಸಿ ಹೋಗಿದ್ದ ಜನರಿಗೆ ಮಳೆ ಸಮಾಧಾನ ತಂದುಕೊಟ್ಟಿದೆ.