ಅರಸೀಕೆರೆ (ವಿಜಯನಗರ ಜಿಲ್ಲೆ): ಲಾರಿ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಸಿಲುಕಿ ಮೃತಪಟ್ಟಿರುವ ಘಟನೆ ಉಚ್ಚಂಗಿದುರ್ಗ-ಹಿರೇಮೆಗಳಗೆರೆ ರಸ್ತೆಯ ಗೌಳೆರಹಟ್ಟಿ ಕ್ರಾಸ್ ಬಳಿ ಸೋಮವಾರ ನಡೆದಿದೆ.
ಹಿರೇಮೆಗಳಗೆರೆ ಗ್ರಾಮದ ಕತ್ತೆರ ರಮೇಶ್ (30) ಮೃತ ಯುವಕ. ರಮೇಶ್ ಉಚ್ಚಂಗಿದುರ್ಗದಿಂದ ಹಿರೇಮೆಗಳಗೆರೆ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದೆ.
ಅನಂತರ ಸವಾರ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ನಂತರ ಚಾಲಕ ಹಾಗೆಯೇ ಲಾರಿ ಓಡಿಸಿಕೊಂಡು ಹೋಗಿದ್ದಾನೆ. ಡಿಕ್ಕಿ ಹೊಡೆದು ಪರಾರಿಯಾದ ಲಾರಿ ಚಾಲಕನನ್ನು ತಕ್ಷಣ ಪತ್ತೆ ಹಚ್ಚಬೇಕು. ಅಲ್ಲಿಯವರೆಗೆ ಮೃತದೇಹ ಸಾಗಿಸಲು ಬಿಡುವುದಿಲ್ಲ ಎಂದು ಮೃತನ ಸಂಬಂಧಿಕರು ರಸ್ತೆಯಲ್ಲಿ ಪಟ್ಟು ಹಿಡಿದು ಕುಳಿತರು. ಲಾರಿ ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಭರವಸೆ ಪೊಲೀಸರು ನೀಡಿದ ಬಳಿಕ ಮೃತದೇಹ ಸಾಗಿಸಲಾಯಿತು.
'ಕಲ್ಲು, ಜಲ್ಲಿ ತುಂಬಿರುವ ಭಾರಿ ಪ್ರಮಾಣದ ಲಾರಿಗಳು ನಿಯಂತ್ರಣ ಇಲ್ಲದೆ ಸಂಚರಿಸುತ್ತಿವೆ. ಮಿತಿ ಮೀರಿ ಎಂ ಸ್ಯಾಂಡ್ ಸಾಗಿಸುತ್ತಿದ್ದಾರೆ. ಕೂಡಲೇ ನಿಯಂತ್ರಣ ಹೇರುವಂತೆ' ಸ್ಥಳೀಯರು ಒತ್ತಾಯಿಸಿದರು. ಅರಸೀಕೆರೆ ಸಬ್ ಇನ್ಸ್ಪೆಕ್ಟರ್ ಎ. ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.