ಹೊಸಪೇಟೆ (ವಿಜಯನಗರ): ‘ಆರ್.ಎಸ್.ಎಸ್ ಬ್ರಾಹ್ಮಣರಿಗೆ ಸೇರಿದ್ದು. ಹಿಂದಿನ ಕಾಲಘಟ್ಟದ ಬ್ರಾಹ್ಮಣಿಕೆ ಅಲ್ಲಿದೆ ಎಂದು ಕೆಲ ಬುದ್ಧಿಜೀವಿಗಳು ಮುಗ್ಧ ಪರಿಶಿಷ್ಟರಲ್ಲಿ ದ್ವೇಷ ಭಾವನೆ ತುಂಬುತ್ತಿದ್ದಾರೆ. ಆರ್.ಎಸ್.ಎಸ್ಗೆ ಬದಲಾಗಿ ಡಿ.ಎಸ್.ಎಸ್. ಪ್ರಾರಂಭಿಸಿ ಎಂದು ಹೇಳುವುದರ ಮೂಲಕ ದ್ವೇಷ ಬಿತ್ತುತ್ತಿದ್ದಾರೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ ತಿಳಿಸಿದರು.
ನಗರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 'ರಾಷ್ಟ್ರತಪಸ್ವಿ ಶ್ರೀಗುರೂಜಿ' ಕನ್ನಡ ಅನುವಾದಿತ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸಾಮರಸ್ಯ ಇದ್ದಾಗ ಸಂಘಟನೆ, ರಾಷ್ಟ್ರ ರೂಪುಗೊಳ್ಳುತ್ತದೆ. ಭಾರತ ಶ್ರೀಮಂತ, ಬಲಿಷ್ಠ ಹಾಗೂ ಶ್ರೇಷ್ಠವಾಗಬೇಕು. ಅದಕ್ಕಾಗಿ ಎಲ್ಲ ಸಮುದಾಯವನ್ನು ಒಗ್ಗೂಡಿಸಬೇಕು. ಹಿಂದೂ ಧರ್ಮಾಚಾರದಲ್ಲಿ ಅಸ್ಪೃಶ್ಯತೆ ಇಲ್ಲ ಎಂಬುದು ಮನವರಿಕೆಯಾಗಬೇಕು. ಪ್ರಧಾನಿಯವರ ‘ಸಬ್ ಕಾ ಸಾಥ್’ ಎನ್ನುವ ಮಂತ್ರವೂ ಇದರ ಮೂಲವಾಗಿದೆ ಎಂದು ಹೇಳಿದರು.
ರಾಕ್ಷಸರು ಸ್ವಹಿತಕ್ಕಾಗಿ ತಪಸ್ಸು ಮಾಡುತ್ತಿದ್ದರು. ಮನುಷ್ಯರು ಲೋಕಹಿತಕ್ಕಾಗಿ ತಪಸ್ಸು ಮಾಡಿದ್ದಾರೆ. ಅದರಲ್ಲಿ ಗುರೂಜಿ ಸಹ ಒಬ್ಬರು. ಸ್ವಂತಕ್ಕಾಗಿ ಎಳ್ಳಷ್ಟು ಮೋಹ, ಆಸಕ್ತಿ ಹೊಂದಿರಲಿಲ್ಲ. ಅವರು ವ್ಯಕ್ತಿಗತ ಪ್ರಚಾರಕ್ಕೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಅವರ ಸಮಗ್ರ ಇತಿಹಾಸದ ಕನ್ನಡದ ಪುಸ್ತಕ ಈಗ ಬಂದಿದೆ. ಈ ಪುಸ್ತಕದಲ್ಲಿ ವ್ಯಕ್ತಿಯ ವೈಭವೀಕರಣ ಇಲ್ಲ, ವ್ಯಕ್ತಿತ್ವದ ಅನಾವರಣವಿದೆ. ಅದೇ ಈ ಪುಸ್ತಕದ ವಿಶೇಷತೆ ಎಂದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ಆರ್.ಮಂಜುನಾಥ್, ಸುಮೇಧಾನಂದ ಸ್ವಾಮೀಜಿ ಇದ್ದರು.