ಹೊಸಪೇಟೆ (ವಿಜಯನಗರ): ಪಿ.ಯು ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆ ಈ ಸಲ ಉತ್ತಮ ಸಾಧನೆ ಮಾಡಿದೆ. ಇಬ್ಬರು ವಿದ್ಯಾರ್ಥಿನಿಯರು ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದರೆ, ಜಿಲ್ಲೆಗೆ ಒಟ್ಟು 8 ರ್ಯಾಂಕ್ಗಳು ಬಂದಿವೆ.
ಜಿಲ್ಲೆಯ ಕೊಟ್ಟೂರಿನ ‘ಇಂದು’ ಸ್ವತಂತ್ರ ಪಿ.ಯು ಕಾಲೇಜಿನ ಶ್ವೇತಾ ಭೀಮಾಶಂಕರ ಭೈರಗೊಂಡ, ಮಡಿವಾಳರ ಸಹನಾ 594 ಅಂಕ ಗಳಿಸಿ ಇಡೀ ರಾಜ್ಯಕ್ಕೆ ಮೊದಲ ರ್ಯಾಂಕ್ ಗಳಿಸಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿ ಜಿ. ಮೌನೇಶ್ 593 ಅಂಕ ಗಳಿಸಿ ಎರಡನೇ ರ್ಯಾಂಕ್ ಸಾಧನೆ ಮಾಡಿದ್ದಾರೆ.
ಈ ಕಾಲೇಜಿನ ಸಮೀರ್ ಖೇಮಣ್ಣ, ಶಾಂತ ಜಿ. ಹಾಗೂ ಕಾವೇರಿ ಜಗ್ಗಳ್ ಮೂವರೂ 591 ಅಂಕ ಗಳಿಸಿ ನಾಲ್ಕನೇರ್ಯಾಂಕ್ ಗಳಿಸಿದ್ದಾರೆ. ‘ಇಂದು’ ಕಾಲೇಜಿನ ಒಟ್ಟು 6 ವಿದ್ಯಾರ್ಥಿಗಳು ರ್ಯಾಂಕ್ ಗಳಿಸಿ, ಮೊದಲ 11 ವಿದ್ಯಾರ್ಥಿಗಳಲ್ಲಿ ಸ್ಥಾನ ಪಡೆದಿದ್ದಾರೆ.
ಜಿಲ್ಲೆಯ ಹರಪನಹಳ್ಳಿಯ ಎಸ್ಯುಜೆಎಂ ಪಿ.ಯು ಕಾಲೇಜಿನ ಎಚ್. ಸಂತೋಷ್ 592 ಅಂಕ ಗಳಿಸಿ 3ನೇ ರ್ಯಾಂಕ್ ಹಾಗೂ ಹೂವಿನಹಡಗಲಿ ಇಟ್ಟಿಗಿ ಪಿಯು ಕಾಲೇಜಿನ ಪೂರ್ಣಿಮಾ ಉಜ್ಜಿನಿ 591 ಅಂಕ ಪಡೆದು ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.
ಸತತ ಏಳು ವರ್ಷಗಳಿಂದ ‘ಇಂದು’ ಪಿ.ಯು ಕಾಲೇಜಿಗೆ ಮೊದಲ ರ್ಯಾಂಕ್ ಬರುತ್ತಿದೆ. ಹೋದ ವರ್ಷ ಕೋವಿಡ್ನಿಂದ ಪರೀಕ್ಷೆ ನಡೆದಿರಲಿಲ್ಲ. ರ್ಯಾಂಕ್ ಬಂದವರು ಕಲಾ ವಿಭಾಗದವರು.
ವಿದ್ಯಾರ್ಥಿಗಳ ಪರಿಶ್ರಮ, ಪೋಷಕರ ಸಹಕಾರ. ಉಪನ್ಯಾಸಕರ ವರ್ಗದ ಕೌಶಲ ಭರಿತ ತರಬೇತಿಯಿಂದ ಕಾಲೇಜಿಗೆ ಮೊದಲ ರ್ಯಾಂಕ್ ಬಂದಿದೆ. –ವೀರಭದ್ರಪ್ಪ, ಆಡಳಿತಾಧಿಕಾರಿ, ‘ಇಂದು’ ಕಾಲೇಜು ಕೊಟ್ಟೂರು