ಹರಪನಹಳ್ಳಿ (ವಿಜಯನಗರ ಜಿಲ್ಲೆ) : ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಹಿರಿಯ ಮಗಳು ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರಿಗೆ ಪಕ್ಷೇತರಳಾಗಿ ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಹಿಂದೊಂದು, ಮುಂದೊಂದು ಮಾಡುವವನಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ಎಚ್.ಪಿ.ಎಸ್.ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷ ಶನಿವಾರ ಆಯೋಜಿಸಿದ್ದ ಮತ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅರಸೀಕೆರೆ ಎನ್.ಕೊಟ್ರೇಶ್ ಪರ ಮತಯಾಚಿಸಿ ಮಾತನಾಡಿದರು.
ಪಕ್ಷೇತರರಾಗಿ ನಿಂತು ಕೈಸುಟ್ಟಕೊಳ್ಳದೇ, ನಾಮಪತ್ರ ಹಿಂಪಡೆದು ಕೊಟ್ರೇಶ್ ಪರ ಕೆಲಸ ಮಾಡಿ ಮುಂದೆ ಏನಾದರೂ ಸಹಾಯ ಮಾಡೋಣ ಎಂದು ಹೇಳಿದ್ದೆ.
ಆದರೆ ನಾನೇ ಪಕ್ಷೇತರ ನಿಲ್ಲುವಂತೆ ಹೇಳಿದ್ದೇನೆ ಎಂದು ಲತಾ ಮಲ್ಲಿಕಾರ್ಜುನ್ ಜನರೆದುರು ಹೇಳುತ್ತಿದ್ದಾರೆ. ಅವರು ರಾಜಕೀಯದಲ್ಲಿರಲು ನಾಲಾಯಕ್. ಪಕ್ಷೇತರ ಅಭ್ಯರ್ಥಿಯನ್ನು ಯಾರು ನಂಬಬಾರದು, ಅವರನ್ನು ಪಕ್ಷದಿಂದ ಹೊರ ಹಾಕುತ್ತೇವೆ. ನಮ್ಮ ಅಭ್ಯರ್ಥಿಗೆ ಹೆಚ್ಚಿನ ಮತಕೊಟ್ಟು ಗೆಲ್ಲಿಸಿ ಎಂದರು.
ಈಗಲೂ ಲತಾ ಕಣದಿಂದ ನಿವೃತ್ತಿ ಹೊಂದಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿ ಎನ್. ಕೊಟ್ರೇಶ್ ಪರ ಕೆಲಸ ಮಾಡುವಂತೆ ಸಭೆಯ ಮೂಲಕ ಸೂಚಿಸುತ್ತೇನೆ. ಕೊಟ್ರೇಶ್ ಅವರನ್ನು ವಿಧಾನಸೌಧಕ್ಕೆ ಕಳಿಸಿ, ನಮ್ಮ ಸರ್ಕಾರ ರೈತ, ಜನಪರ, ಭ್ರಷ್ಟಾಚಾರ ರಹಿತ ಆಡಳಿತ ಕೊಡುತ್ತೇವೆ ಎಂದು ಹೇಳಿದರು.
ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಕ್ಷೇತ್ರದಲ್ಲಿ 75 ವರ್ಷದ ಬಳಿಕ ವೀರಶೈವರಿಗೆ ಪ್ರಥಮ ಬಾರಿಗೆ ಟಿಕೆಟ್ ಸಿಕ್ಕಿದೆ. ಅಧಿಕೃತ ಅಭ್ಯರ್ಥಿ ಕೊಟ್ರೇಶ್ ಕ್ಷೇತ್ರದಾದ್ಯಂತ ಮತಯಾಚಿಸುತ್ತಿದ್ದಾರೆ, ಆದರೆ ಇಲ್ಲಿಯ ಪಕ್ಷೇತರ ಅಭ್ಯರ್ಥಿ (ಲತಾ ಮಲ್ಲಿಕಾರ್ಜುನ್ ) ಒಬ್ಬರು ಸಿದ್ದರಾಮಯ್ಯನವರೇ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವಂತೆ ಹೇಳಿದ್ದಾರೆ ಎಂದು ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಅಭ್ಯರ್ಥಿ ಅರಸೀಕೆರೆ ಎನ್ .ಕೊಟ್ರೇಶ್ , ‘ವಿಧಾನಸಭೆ ಚುನಾವಣೆಯಲ್ಲಿ ಎರಡು ಬಾರಿ ಸೋತಿರುವೆ. ಈ ಬಾರಿ ಸ್ಥಳೀಯ ಅಭ್ಯರ್ಥಿಯಾಗಿರುವ ನನಗೆ ಸೇವೆ ಮಾಡಲು ಒಮ್ಮೆ ಅವಕಾಶ ಮಾಡಿಕೊಡಿ’ ಎಂದರು.
ಮುಖಂಡರಾದಅಬ್ದುಲ್ ಜಬ್ಬಾರ್ ಸಾಬ್, ಪ್ರಕಾಶ್ ರಾಥೋಡ್, ಬ್ಲಾಕ್ ಸಮಿತಿ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಕಮ್ಮತ್ತಹಳ್ಳಿ ಮಂಜುನಾಥ್, ಪ್ರೇಮಕುಮಾರ, ಮುಖಂಡರಾದ ಶಶಿಧರ ಪೂಜಾರ್, ಎಚ್.ಬಿ.ಪರಶುರಾಮಪ್ಪ, ಎಚ್.ಕೆ.ಹಾಲೇಶ್, ಅಂಬಾಡಿ ನಾಗರಾಜ್, ಡಿ.ಬಸವರಾಜ್ ಇತರರಿದ್ದರು.
ಲಿಂಗಾಯತರಿಗೆ ಅಗೌರವ
ಬಿಜೆಪಿಯವರು ಮಾತ್ರ ಲಿಂಗಾಯತರನ್ನು ರಕ್ಷಿಸುತ್ತಾರೆ ಎಂಬುದು ಶುದ್ದ ಸುಳ್ಳು. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದರು. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯಂತಹ ನಾಯಕರನ್ನು ಪಕ್ಷದಿಂದ ತೆಗೆದು ಹಾಕಿದ್ದಾರೆ. ಇದರಿಂದ ಸ್ಪಷ್ಟವಾಗುತ್ತದೆ ವೀರಶೈವ ಲಿಂಗಾಯತರನ್ನು ಅಗೌರವ ಮಾಡಿರುವ ಪಕ್ಷ ಬಿಜೆಪಿ ಎಂದು ಸಿದ್ದರಾಮಯ್ಯ ಹೇಳಿದರು.
ತನಿಖೆಗೆ ಜೀವಂತ ದಾಖಲೆಗಳು ಸಾಕಾಗಲ್ವ
ಶೇ.40 ಕಮಿಷನ್ ಬಗ್ಗೆ ತನಿಖೆ ಮಾಡಲು ಸಿ.ಎಂ ಬಸವರಾಜ ಬೊಮ್ಮಾಯಿಗೆ ಅಸೆಂಬ್ಲಿಯಲ್ಲಿ ಪ್ರಶ್ನೆ ಮಾಡಿದರೆ, ದಾಖಲೆ ಕೊಡಿ ಎಂದು ಕೇಳುತ್ತಾರೆ. ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಆಫೀಸರ್ ಜೈಲಿಗೆ ಹೋಗಿದ್ದಾರೆ. ಸಂತೋಷ್ ಸಾವಿನಿಂದಾಗಿ ಈಶ್ವರಪ್ಪ ರಾಜೀನಾಮೆ ಕೊಟ್ಟು ಮನೆಗೆ ಹೋದ. ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಲಂಚ ಪಡೆಯುವಾಗ ಸಿಕ್ಕಿಬಿದ್ದು ಜೈಲು ಸೇರಿದ್ದಾರೆ. ತನಿಖೆ ಮಾಡಲು ಜೀವಂತ ದಾಖಲೆಗಳು ಸಾಕಾಗಲ್ವ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.