ಹೊಸಪೇಟೆ (ವಿಜಯನಗರ): ಎರಡನೇ ವರ್ಷವೂ ಕೊರೊನಾ ಕರಿಛಾಯೆಯ ನಡುವೆ ಮೊಹರಂ, ವರಮಹಾಲಕ್ಷ್ಮಿ ಹಬ್ಬ ಸರಳವಾಗಿ ಆಚರಿಸುವ ಅನಿವಾರ್ಯತೆ ಬಂದೊದಗಿದೆ.
ಪ್ರತಿ ವರ್ಷ ಮೊಹರಂ ಹಿಂದಿನ ದಿನ ನಗರದ ರಾಮ ಟಾಕೀಸ್ ರಾಮಲಿ ಮಸೀದಿ ಬಳಿ ಹಿಂದೂ–ಮುಸ್ಲಿಮರು ಕೆಂಡ ಹಾದು ಹರಕೆ ತೀರಿಸುತ್ತಿದ್ದರು. ಈ ವರ್ಷ ಅದಕ್ಕೆ ಜಿಲ್ಲಾಡಳಿತ ಅವಕಾಶ ಕಲ್ಪಿಸದ ಕಾರಣ ಭಕ್ತರು ಗುರುವಾರ ಮಸೀದಿ ಎದುರಿನ ಖಾಲಿ ಜಾಗದಲ್ಲಿ ಉಪ್ಪು ಹಾಕಿ, ಉದ್ದಿನ ಕಡ್ಡಿ ಬೆಳಗಿ ದೂರದಿಂದಲೇ ದೇವರಿಗೆ ಕೈಮುಗಿದು ತೆರಳಿದರು.
ಈ ವರ್ಷ ಮಸೀದಿ ಪರಿಸರದಲ್ಲಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿಲ್ಲ. ಇದರಿಂದಾಗಿ ಇಡೀ ಪರಿಸರ ಬಿಕೋ ಎನ್ನುತ್ತಿದೆ. ಶುಕ್ರವಾರ ಮೊಹರಂ ದಿನ ಪೀರಲಗಳ ಮೆರವಣಿಗೆ ನಡೆಸಲಾಗುತ್ತದೆ. ಈ ವರ್ಷಕ್ಕೂ ಅದಕ್ಕೂ ಅವಕಾಶ ಕೊಟ್ಟಿಲ್ಲ. ಪ್ರತಿ ವರ್ಷ ಮಸೀದಿ ಆವರಣದಲ್ಲಿ ಜನಜಾತ್ರೆ ಇರುತ್ತಿತ್ತು. ಹೆಚ್ಚಿನ ಜನ ಸೇರದಂತೆ ನಿರ್ಬಂಧ ಹೇರಿರುವುದರಿಂದ ಒಬ್ಬೊಬ್ಬರಾಗಿ ಬಂದು ದೇವರ ದರ್ಶನ ಪಡೆದುಕೊಂಡು ಹೋಗುತ್ತಿದ್ದಾರೆ.
ಖರೀದಿ ಭರಾಟೆ:ಬೆಲೆ ಏರಿಕೆ ನಡುವೆ ವರಮಹಾಲಕ್ಷ್ಮಿ ಹಬ್ಬಕ್ಕೆ ಗುರುವಾರ ನಗರದ ಮಾರುಕಟ್ಟೆಗಳಲ್ಲಿ ಜನ ಅಗತ್ಯ ವಸ್ತುಗಳನ್ನು ಖರೀದಿಸಿದರು. ನಗರದ ಸೋಗಿ ಮಾರುಕಟ್ಟೆ, ಮಹಾತ್ಮ ಗಾಂಧಿ ವೃತ್ತ, ಎಪಿಎಂಸಿಯಲ್ಲಿ ಹೂ, ಹಣ್ಣು, ತರಕಾರಿ, ಬಾಳೆದಿಂಡು ಖರೀದಿಸಿದರು.