ಹೊಸಪೇಟೆ (ವಿಜಯನಗರ): ಸಾರಿಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಹಂಪಿಗೆ ಭೇಟಿ ನೀಡಿದರು.
ಹಂಪಿಯ ಜನತಾ ಕಾಲೊನಿಯಲ್ಲಿ ನಡೆದ ಹೋಮ ಹವನದಲ್ಲಿ ಪಾಲ್ಗೊಂಡರು. ಬಳಿಕ ವಿರೂಪಾಕ್ಷೇಶ್ವರ, ಯಂತ್ರೋದ್ಧಾರಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಇದೇ ವೇಳೆ ಪ್ರವಾಸಿ ಮಾರ್ಗದರ್ಶಿಗಳು ಅವರನ್ನು ಕಂಡು ಮಾಸಿಕ ಗೌರವ ಧನ ಕೊಡಿಸಬೇಕೆಂದು ಮನವಿ ಸಲ್ಲಿಸಿದರು.
‘ನಾನು ಈ ಹಿಂದೆ ಪ್ರವಾಸೋದ್ಯಮ ಸಚಿವನಿದ್ದಾಗ ಗೈಡ್ಗಳಿಗೆ ಮಾಸಿಕ ಗೌರವ ಧನ ನೀಡುವುದರ ಬಗ್ಗೆ ಪ್ರಯತ್ನಿಸಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಕುರಿತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಜಿ. ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ಬಿ ಹಂಪಿ, ಹುಲುಗಪ್ಪ, ನಂಜುಂಡಿ, ಗೋಪಿನಾಥ್, ಡಿ ಶಿವು, ವಿ ಗೋಪಾಲ್ ಇದ್ದರು.