ಹೊಸಪೇಟೆ (ವಿಜಯನಗರ): ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಬೇಕೆಂದು ಆಗ್ರಹಿಸಿ ಕಳೆದ 15 ದಿನಗಳಿಂದ ಸಾರಿಗೆ ನೌಕರರು ನಡೆಸುತ್ತಿದ್ದ ಮುಷ್ಕರ ಬುಧವಾರ ಕೊನೆಗೊಂಡಿತು.
ಕಳೆದ ಎರಡ್ಮೂರು ದಿನಗಳಿಂದ ಸಾರಿಗೆ ಸಂಸ್ಥೆಯ ಬಸ್ಗಳ ಓಡಾಟ ಹೆಚ್ಚಾಗುತ್ತಲೇ ಇತ್ತು. ಬುಧವಾರ ಮುಷ್ಕರ ಕೊನೆಗೊಂಡಿದ್ದರಿಂದ ಇನ್ನಷ್ಟು ಬಸ್ಗಳು ರಸ್ತೆಗಿಳಿದವು. ಬೆರಳೆಣಿಕೆಯಷ್ಟು ಖಾಸಗಿ ವಾಹನಗಳು ಬಸ್ ನಿಲ್ದಾಣದಿಂದ ಓಡಾಡಿದವು.
‘ಬುಧವಾರ 258 ಬಸ್ಗಳು ಸಂಚಾರ ಬೆಳೆಸಿವೆ. ಹೆಚ್ಚಿನ ಸಿಬ್ಬಂದಿ ಕೆಲಸಕ್ಕೆ ಮರಳಿರುವುದರಿಂದ ಸಂಜೆ, ರಾತ್ರಿ ಕೂಡ ಎಂದಿನಂತೆ ಬಸ್ಗಳು ಬೇರೆ ಬೇರೆ ಭಾಗಗಳಿಗೆ ಪಯಣ ಬೆಳೆಸಿವೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಸಪೇಟೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶೀನಯ್ಯ ತಿಳಿಸಿದ್ದಾರೆ.