ದೊಡ್ಡ ಮಸೀದಿ ಬಳಿ ಮೆರವಣಿಗೆ ಬಂದಾಗ ಕಣ್ತುಂಬಿಕೊಳ್ಳಲು ನೂರಾರು ಜನ ಸೇರಿದ್ದರು. ಎತ್ತರದ ಮೂರ್ತಿ ಇದ್ದದ್ದರಿಂದ ವಿದ್ಯುತ್ ತಂತಿಗಳು ಎದುರಾದವು. ಕೆಲಹೊತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿ, ವಿದ್ಯುತ್ ತಂತಿಗಳನ್ನು ಮೇಲಕ್ಕೆತ್ತಿ ಮೂರ್ತಿ ಮುಂದೆ ಸಾಗಲು ಜೆಸ್ಕಾಂ ಸಿಬ್ಬಂದಿ ನೆರವಾದರು. ರಾತ್ರಿ ಹತ್ತು ಗಂಟೆಯಾಗುತ್ತಿದ್ದಂತೆ ಪೊಲೀಸರು ಡಿ.ಜೆ. ಬಂದ್ ಮಾಡಿಸಿದರು. ಅನಂತರ ಮೂರ್ತಿ ವಿಸರ್ಜನೆಗೆ ಕೊಂಡೊಯ್ದರು. ದೊಡ್ಡ ಮಸೀದಿ ಸಮೀಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಕಾಂ ಹೂಡಿದ್ದರು. ಮಸೀದಿ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ವಿಜಯನಗರ ಹಿಂದೂ ಮಹಾಗಣಪತಿಯವರು ಹನ್ನೊಂದನೇ ದಿನ ಮೂರ್ತಿ ವಿಸರ್ಜನೆ ಮಾಡುತ್ತಾರೆ. ಇದರೊಂದಿಗೆ ಪ್ರಮುಖ ಗಣೇಶ ಮಂಡಳಿಗಳ ಮೂರ್ತಿ ವಿಸರ್ಜನೆ ಮುಗಿದಂತಾಗಿದೆ.