ಸಂಜೆ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಸಕಲ ಮಂಗಳವಾದ್ಯದೊಂದಿಗೆ ತೇರು ಬಯಲಿಗೆ ತರಲಾಯಿತು.
ಪಲ್ಲಕ್ಕಿ ಉತ್ಸವವು ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಅರ್ಚಕರು ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ರಥವನ್ನೇರಿ ಸ್ವಾಮಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಿದರು. ಪಟಾಕ್ಷಿ ಸವಾಲಿನಲ್ಲಿ ಹಂಪನೂರು ಗ್ರಾಮದ ರೇವಣಸಿದ್ಧಯ್ಯ ₹3.60 ಲಕ್ಷಕ್ಕೆ ತಮ್ಮದಾಗಿಸಿಕೊಂಡರು.
ನಂತರ ಭಕ್ತರು ಮರುಳಸಿದ್ದೇಶ್ವರ ಮಹಾರಾಜರಿಗೆ ಜೈ ಎಂದು ಜೈಕಾರ ಹಾಕುತ್ತ ರಥವನ್ನು ಭಕ್ತಿಯಿಂದ ಎಳೆಯಲು ಪ್ರಾರಂಭಿಸುತ್ತಿದ್ದಂತೆ ನೆರದ ಭಕ್ತರು ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದರು. ಬಾಳೆಹಣ್ಣು, ಉತ್ತತ್ತಿ ಮತ್ತು ದವನವನ್ನು ತೂರಿ ಭಕ್ತಿ ಸಮರ್ಪಿಸಿದರು.
ರಥವು ಪಾದಗಟ್ಟೆ ತಲುಪಿ ಗೊದೂಳಿ ಸಮಯದಲ್ಲಿ ಮೂಲ ನೆಲೆ ತಲುಪುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ್ದ ಅಸಂಖ್ಯ ಭಕ್ತ ಸಮೂಹ ರಥೋತ್ಸವಕ್ಕೆ ಸಾಕ್ಷಿಯಾಯಿತು.