ಹೊಸಪೇಟೆ (ವಿಜಯನಗರ): ಹೊಸಪೇಟೆ ಬಗ್ಗೆ ಎಲ್ಲಿಲ್ಲದ ಪ್ರೀತಿ, ಅಭಿಮಾನ ಹೊಂದಿದ್ದ ನಟ ದಿವಂಗತ ಪುನೀತ್ ರಾಜಕುಮಾರ್ ಬಗ್ಗೆಯೂ ಸ್ಥಳೀಯರು ಅಷ್ಟೇ ಮಮತೆ ಹೊಂದಿದ್ದಾರೆ. ಅದರ ದ್ಯೋತಕವಾಗಿ ಅವರ ಸವಿನೆನಪಿನಲ್ಲಿ ಅವರ ಕಂಚಿನ ಪುತ್ಥಳಿಯನ್ನು ನಗರದ ಹೃದಯಭಾಗದಲ್ಲಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾರೆ.
ಪುತ್ಥಳಿ ಅನಾವರಣ ಸಮಾರಂಭ ಭಾನುವಾರ ಸಂಜೆ 5ಕ್ಕೆ ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿ ಜರುಗಲಿದೆ. ಡಾ. ರಾಜಕುಮಾರ್ ಕುಟುಂಬ ಸದಸ್ಯರಾದ ನಟರಾದ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ಪತ್ನಿ ಅಶ್ವಿನಿ ಅವರು ಪುತ್ಥಳಿ ಅನಾವರಣಗೊಳಿಸುವರು.
ವಿನಯ್ ರಾಜಕುಮಾರ್, ಯುವ ರಾಜಕುಮಾರ್, ಧಿರೇನ್ ರಾಮಕುಮಾರ್, ನಟರಾದ ಶ್ರೀಮುರಳಿ, ಅಜಯರಾವ್, ನಿರ್ದೇಶಕರಾದ ಸಂತೋಷ್ ಆನಂದ್ರಾಮ್, ಚೇತನ್ಕುಮಾರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪಾಲ್ಗೊಳ್ಳುವರು. ನಂತರ ಗುರುಕಿರಣ್ ಸಂಗೀತ್ ಕಾರ್ಯಕ್ರಮ ನಡೆಸಿಕೊಡುವರು.
ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆಯನ್ನು ನಿರ್ಮಿಸಲಾಗಿದ್ದು, ಭಾನುವಾರ ಸಂಜೆ ಪುನೀತ್ ರಾಜಕುಮಾರ್ ವೃತ್ತದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
ಕಾರ್ಯಕ್ರಮಕ್ಕೆ ಹೊಸಪೇಟೆಯ ಪುನೀತ್ ರಾಜಕುಮಾರ್ ವೃತ್ತದಲ್ಲಿ ವೇದಿಕೆ ನಿರ್ಮಿಸುತ್ತಿರುವುದು
7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಆಂಧ್ರ ಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಪುತ್ಥಳಿಯನ್ನು ಪುನೀತ್ ರಾಜಕುಮಾರ್ ವೃತ್ತದಲ್ಲಿ ಪ್ರತಿಷ್ಠಾಪಿಸಿ, ಅಭಿವೃದ್ಧಿ ಪಡಿಸಲಾಗಿದೆ. ಭಾನುವಾರ ಅಧಿಕೃತವಾಗಿ ಅನಾವರಣ ಸಮಾರಂಭ ಜರುಗಲಿದೆ.
ಪುನೀತ್ ಅಭಿಮಾನಿ ಬಳಗದವರು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಯುವ ಮುಖಂಡ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿಗೆ ತೆರಳಿ, ಡಾ. ರಾಜಕುಮಾರ್ ಕುಟುಂಬ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.