ಹೊಸಪೇಟೆ (ವಿಜಯನಗರ): ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಮದುವೆ ಮಾಡಿದವರಿಗೆ ಅಧಿಕಾರಿಗಳು ₹5,000 ದಂಡ ಹೇರಿ ಗುರುವಾರ ಬಿಸಿ ಮುಟ್ಟಿಸಿದ್ದಾರೆ.
ಕರ್ಫ್ಯೂ ಅವಧಿಯಲ್ಲಿ 50 ಜನರನ್ನು ಸೇರಿಸಿ ಮದುವೆ ಮಾಡಲು ಅವಕಾಶ ನೀಡಲಾಗಿದೆ. ಆದರೆ, ತಾಲ್ಲೂಕಿನ ಕಮಲಾಪುರದ 17ನೇ ವಾರ್ಡಿನಲ್ಲಿ 50ಕ್ಕಿಂತ ಹೆಚ್ಚು ಜನರನ್ನು ಸೇರಿಸಿ ಮದುವೆ ಮಾಡಲಾಗಿದೆ. ವಿಷಯ ಗೊತ್ತಾಗಿ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ವಿವಾಹ ಏರ್ಪಡಿಸಿದ್ದವರಿಗೆ ₹5,000 ದಂಡ ಹೇರಿ, ಎಚ್ಚರಿಕೆ ಕೊಟ್ಟು ಅಲ್ಲಿ ಸೇರಿದ್ದ ಜನರನ್ನು ಕಳುಹಿಸಿದರು.
‘ಕರ್ಫ್ಯೂ ಅವಧಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಯಾರೂ ಮದುವೆ ಮಾಡುವಂತಿಲ್ಲ. ಅಳ್ಳಿಕೆರೆಯಲ್ಲಿ ಜನ ಸೇರಿದ್ದರಿಂದ ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸಂಬಂಧಿಸಿದವರಿಗೆ ದಂಡ ಹೇರಲಾಗಿದೆ. ಬಳಿಕ ಎಚ್ಚರಿಕೆ ಕೊಟ್ಟು ಅಲ್ಲಿದ್ದವರನ್ನು ಕಳುಹಿಸಿಕೊಡಲಾಯಿತು’ ಎಂದು ಹಿರಿಯ ಆರೋಗ್ಯ ಅಧಿಕಾರಿ ಶಶಿಭೂಷಣ್ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ನೋಡಲ್ ಎಂಜಿನಿಯರ್ ಹನುಮಂತಪ್ಪ, ಪೊಲೀಸ್ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.