ಹೊಸಪೇಟೆ(ವಿಜಯನಗರ): ‘ವಿವಿಧೋದ್ದೇಶ ಸಂಸ್ಥೆಗಳಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವ ಮಹಿಳೆಯರು ಆರ್ಥಿಕವಾಗಿ ಸದೃಢರಾಗುವ ಜೊತೆ ಸಾಮಾಜಿಕ ಅರಿವು ಬೆಳೆಸಿಕೊಳ್ಳುವುದು ಕೂಡ ಅಗತ್ಯ’ ಎಂದು ವಕೀಲ ವಿನಾಯಕ ತಿಳಿಸಿದರು.
ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಬುಧವಾರ ತಾಲ್ಲೂಕಿನ ಕಮಲಾಪುರದಲ್ಲಿ ಏರ್ಪಡಿಸಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಬಾಲ್ಯವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸಬೇಕು. ಸಂಸ್ಕಾರವಂತರಾಗಬೇಕು’ ಎಂದರು.
ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಪ್ರಾದೇಶಿಕ ನಿರ್ದೇಶಕ ಪಿ.ಕೆ.ಪುರುಷೋತ್ತಮ್ ಮಾತನಾಡಿ, ಸಾಮಾಜಿಕ ಅರಿವು ನಿಮ್ಮನ್ನು ಸಬಲಗೊಳ್ಳಲು ಸಹಕಾರಿಯಾಗುತ್ತದೆ. ಸಂಘದ ವತಿಯಿಂದ ಆರ್ಥಿಕ ಅಭಿವೃದ್ಧಿಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಮತ್ತಷ್ಟು ಏಳಿಗೆ ಹೊಂದಬೇಕು’ ಎಂದರು.
ಎಸ್ಐ ವಿಜಯಲಕ್ಷ್ಮಿ, ಮಾನವ ಹಕ್ಕುಗಳ ಹಿತರಕ್ಷಣಾ ಸಮಿತಿ ಸದಸ್ಯೆ ಈರಮ್ಮ, ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಚಿದಾನಂದ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಡಿ.ಶರಣಮ್ಮ, ಹಾಲಪ್ಪ, ಮಲ್ಲೇಶ್ ಮತ್ತು ರೇಖಾ ಇದ್ದರು.