ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಜಾರಿ ಚುರುಕುಗೊಳಿಸಿ

ವಿಡಿಯೊ ಸಂವಾದದಲ್ಲಿ ಚುನಾವಣಾ ಅಕ್ರಮ ತಡೆಗಟ್ಟಲು ಸೂಚನೆ
Last Updated 29 ಮಾರ್ಚ್ 2018, 11:06 IST
ಅಕ್ಷರ ಗಾತ್ರ

ಹಾಸನ: ಚುನಾವಣಾ ದಿನಾಂಕ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಚುನಾವಣಾ ಅಕ್ರಮ ತಡೆಗಟ್ಟುವ ಕ್ರಮಗಳನ್ನು ಚುರುಕುಗೊಳಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗದ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಜಗದೀಶ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲಾ ಜಿಲ್ಲೆಗಳ ಮಾದರಿ ನೀತಿ ಸಂಹಿತೆ ಜಾರಿ ತಂಡದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿದ ಅವರು
ನೀತಿ ಸಂಹಿತೆ ಜಾರಿ ಕುರಿತು ಸಲಹೆ, ಸೂಚನೆ ಹಾಗೂ ಮಾರ್ಗದರ್ಶನಗಳನ್ನು ನೀಡಿದರು. ಈಗಿನಿಂದ ನಾಮಪತ್ರ ಸಲ್ಲಿಕೆ ಆಗುವವರೆಗೆ ನಡೆಯುವ ರಾಜಕೀಯ ಸಭೆ ಸಮಾರಂಭದ ಖರ್ಚು, ವೆಚ್ಚ ಪಕ್ಷದ ಖರ್ಚಿನ ಲೆಕ್ಕದ ಖಾತೆಗೆ ತೆಗೆದುಕೊಳ್ಳಬೇಕು, ಪ್ರತಿಯೊಬ್ಬರು ಕಾರ್ಯಕ್ರಮ ರ್‍್ಯಾಲಿಗಳ ಖರ್ಚು, ವೆಚ್ಚದ ಬಗ್ಗೆ ತೀವ್ರ ನಿಗಾವಹಿಸಬೇಕು. ಎಲ್ಲಾವನ್ನೂ ವಿಡಿಯೊ ದಾಖಲೆಗಳ ತಂಡ ದಾಖಲಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಅಭ್ಯರ್ಥಿಗಳ ಲೆಕ್ಕ ಪತ್ರ ನಿರ್ವಹಣೆ, ಖರ್ಚು, ವೆಚ್ಚ , ಸ್ಟಾರ್ ಪ್ರಚಾರಕರು ಬಂದಾಗ ಲೆಕ್ಕದ ವಿವರಗಳನ್ನು ಯಾರ ಖಾತೆಗೆ ತೆಗೆದುಕೊಳ್ಳಬೇಕು, ವಾಹನ ಬಳಕೆಗಳಿಗೆ ಇರುವ ಇತಿಮಿತಿ ನಿಯಮಾವಳಿಗಳ ಬಗ್ಗೆ ಅವರು ವಿವರಿಸಿದರು.

ಮಾಧ್ಯಮ ದೃಢೀಕರಣ ಮತ್ತು ನಿಗಾ ಸಮಿತಿ ದೃಶ್ಯ, ಶ್ರವ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಗೊಳ್ಳುವ ಜಾಹೀರಾತುಗಳನ್ನು ಹೇಗೆ ಯಾವ ಲೆಕ್ಕಕ್ಕೆ ಹಾಕಬೇಕು, ಮಾಧ್ಯಮ ಜಾಹೀರಾತುಗಳ ಪ್ರಕಟ ಪೂರ್ವ ದೃಢೀಕರಣ ವ್ಯವಸ್ಥೆಗಳು ಹೇಗೆ, ಪಾವತಿ ಸುದ್ದಿಯನ್ನು ಯಾವ ರೀತಿಯಲ್ಲಿ ಪರಿಗಣಿಸಿ ಅಭ್ಯರ್ಥಿಗಳ ವೆಚ್ಚವನ್ನು ದಾಖಲಿಸಬೇಕು ಎಂಬುದನ್ನು ಜಗದೀಶ್ ವಿವರಿಸಿದರು.

ಪ್ರತಿಯೊಬ್ಬ ಅಭ್ಯರ್ಥಿ ನಾಮ ಪತ್ರ ಸಲ್ಲಿಕೆ ವೇಳೆ ತಮ್ಮ ಸಾಮಾಜಿಕ ಜಾಲ ತಾಣಗಳ ಖಾತೆಗಳ ವಿವರಗಳನ್ನು ಒದಗಿಸಬೇಕು. ಜಾಹೀರಾತುಗಳಿಗೆ ಕ್ರಿಯೇಟಿವ್ ಗಳ ತಯಾರಿಕಾ ವೆಚ್ಚ ಖಾತೆಗಳ ನಿರ್ವಹಣೆ ಮಾಡುವುದರ ಸಂಭಾವನೆ ಮತ್ತು ಜಾಲತಾಣಗಳ ವೆಚ್ಚಗಳನ್ನು ಅಭ್ಯರ್ಥಿಗಳ ವೆಚ್ಚದ ಖಾತೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಿವರಿಸಿದರು.

ಜಿಲ್ಲಾ ಮಟ್ಟದಲ್ಲಿ ಅಕ್ರಮ ಹಣ ಸಾಗಾಣಿಕೆ, ವ್ಯವಹಾರ ಪತ್ತೆ ಹಚ್ಚುವ ಸಂಬಂಧ ( ILLEGAL MONEY TRANSACTION TRACKING TEAM) ಅಧಿಕಾರಿಗಳ ತಂಡ ರಚಿಸಲಾಗಿದೆ. ಈ ತಂಡ ಯಾವುದೇ ದಾಖಲೆಗಳು ಇಲ್ಲದೇ ಸಾಗಾಣಿಕೆ ಮಾಡುವ ಮೊತ್ತವನ್ನು ಚುನಾವಣಾ ಕಾಯ್ದೆಯಂತೆ ವಶ ಪಡಿಸಿಕೊಂಡು ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜಗದೀಶ್ ತಿಳಿಸಿದರು.

ಸೆಕ್ಟರ್ ಅಧಿಕಾರಿಗಳಿಗೆ ನೀಡಲಾಗುವ ವಿಶೇಷ ಅಧಿಕಾರವನ್ನು ಕಾನೂನುಬದ್ಧವಾಗಿ ನಿರ್ವಹಿಸುವ ಮೂಲಕ ಚುನಾವಣೆಗೆ ಯಾವುದೇ ಅಡೆತಡೆ ಎದುರಾಗದಂತೆ ಕ್ರಮವಹಿಸಬೇಕು.ಅಕ್ರಮ ಮದ್ಯ ಸಾಗಣೆ ತಡೆಯಲು ಅಬಕಾರಿ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಿಳಿಸಿದರು.

ಸಂವಾದದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ ಜಾನಕಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಉಪ ವಿಭಾಗಾಧಿಕಾರಿಗಳಾದ ಎಚ್.ಎಲ್.ನಾಗರಾಜ್, ಲಕ್ಷ್ಮೀಕಾಂತ್ ರೆಡ್ಡಿ, ವಿಶೇಷ ಭೂಸ್ವಾಧೀನಾಧಿಕಾರಿ ಬಿ.ಎ. ಜಗದೀಶ್, ತಹಶೀಲ್ದಾರ್ ಗಳು ಹಾಜರಿದ್ದರು.

ಮೇ 18ರವರೆಗೆ ಶಸ್ತ್ರ, ಬಂದೂಕು ನಿಷೇಧ

ಚುನಾವಣೆ ನಡೆಯುವ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲಾ ಶಸ್ತ್ರ, ಬಂದೂಕು ಪರವಾನಗಿದಾರರು ವ್ಯಾಪ್ತಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಅಥವಾ ಅಧಿಕೃತ ಆಯುಧ ಮತ್ತು ಮದ್ದುಗುಂಡುಗಳ ವಹಿವಾಟುದಾರರಲ್ಲಿ ಠೇವಣಿ ಇರಿಸಬೇಕು. ಚುನಾವಣಾ ಘೋಷಿತ ಪ್ರದೇಶದಲ್ಲಿ ಹೊರಗಿನ ಅಥವಾ ಯಾವುದೇ ವ್ಯಕ್ತಿಗಳು ಶಸ್ತ್ರ, ಬಂದೂಕು ಹೊಂದಿರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ರೋಹಿಣಿ ಆದೇಶ ಹೊರಡಿಸಿದ್ದಾರೆ. ಈ ಆದೇಶ ಮಾ.27 ರಿಂದ ಮೇ.18 ರವರೆಗೆ (ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳುವ ವರೆಗೆ) ಜಾರಿಯಲ್ಲಿರುತ್ತದೆ.

ಬ್ಯಾಂಕ್ ಗಳು, ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಭದ್ರತೆಗಾಗಿ ಆಯುಧಗಳನ್ನು ಹೊಂದಿರುವವರು ಹಾಗೂ ವೈಯಕ್ತಿಕವಾಗಿ ಜೀವ ಬೆದರಿಕೆ ಹೊಂದಿರುವವರು ಆಯುಧಗಳನ್ನು ತಮ್ಮಲ್ಲಿಯೇ ಇಟ್ಟುಕೊಳ್ಳುವ ಅನಿವಾರ್ಯತೆಯ ಸಕಾರಣಗಳೊಂದಿಗೆ ತಮ್ಮ ವ್ಯಾಪ್ತಿ ಪ್ರದೇಶದ ಪೊಲೀಸ್‌ ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪರೀಶಿಲಿಸಿ ಅರ್ಹತೆ ಆಧಾರದನ್ವಯ ಪೊಲೀಸ್‌ ಠಾಣೆಯ ಮುಖ್ಯಸ್ಥರ ಜವಾಬ್ದಾರಿ ಮೇಲೆ, ಆಯುಧಗಳನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಬಹುದು ಎಂದು ತಿಳಿಸಿದ್ದಾರೆ.

ಸಹಾಯಕ ವೆಚ್ಚ ವೀಕ್ಷಕರ ನೇಮಕ

ಮಾದರಿ ನೀತಿ ಸಂಹಿತೆ ಅನುಷ್ಠಾನ  ಹಾಗೂ ಚುನಾವಣಾ ವೆಚ್ಚಗಳ ಕುರಿತು ಹೆಚ್ಚಿನ ನಿಗಾವಹಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ ಸಹಾಯಕ ವೆಚ್ಚ ವೀಕ್ಷಕರನ್ನು ನೇಮಕಾತಿ ಮಾಡಿ ಜಿಲ್ಲಾಧಿಕಾರಿ ರೋಹಿಣಿ ಆದೇಶಿಸಿದ್ದಾರೆ.

193-ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರಕ್ಕೆ ಹಾಸನದ ಸ್ಟೇಟ್ ಬ್ಯಾಂಕ್ ಇಂಡಿಯಾ ಮುಖ್ಯ ವ್ಯವಸ್ಥಾಪಕ ರಾಜೇಂದ್ರ ಚಿತ್ತೂರು, ಮೊಬೈಲ್ ನಂ- 9482272878,
194-ಅರಸೀಕೆರೆ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸೇಗೌಡ ಮೊ.9480867003,
195-ಬೇಲೂರು, ಬಿ.ಎಸ್.ಎನ್.ಎಲ್ ಲೆಕ್ಕಾಧಿಕಾರಿ ಕಾಂತರಾಜು ಮೊ. 9449428555,
196-ಹಾಸನ, ಕೇಂದ್ರ ತೆರಿಗೆ ಇಲಾಖೆ ಅಧೀಕ್ಷಕ ಗುರುರಾಜ್ ಜಿ.ನಾಯಕ್ ಮೊ. 9845032511,
197-ಹೊಳೆನರಸೀಪುರ, ಕೇಂದ್ರ ತೆರಿಗೆ ಇಲಾಖೆ ಅಧೀಕ್ಷಕ ಡಿ.ಆರ್. ಗೋಪಾಲ ರಾಜು ಮೊ. 9845250369,
198-ಅರಕಲಗೂಡು, ಬಿ.ಎಸ್.ಎನ್.ಎಲ್ ಲೆಕ್ಕಾಧಿಕಾರಿ ಚಂದ್ರಹಾಸ ಮೊ. 9449850577,
199-ಸಕಲೇಶಪುರ ಬಿ.ಎಸ್.ಎನ್.ಎಲ್ ಲೆಕ್ಕಾಧಿಕಾರಿ ಭಾಗ್ಯ.

ದೂರು ಸಲ್ಲಿಕೆಗೆ ವಾಟ್ಸ್‌ಆ್ಯಪ್‌ ಸಂಖ್ಯೆ

ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ದೂರು ಸಲ್ಲಿಸಲು ವಾಟ್ಸ್‌ಆ್ಯಪ್‌ ಸಂಖ್ಯೆ ತೆರೆಯಲಾಗಿದೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಹಾಗೂ ಅಕ್ರಮಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ಅಕ್ರಮಗಳ ಬಗ್ಗೆ ಛಾಯಚಿತ್ರದೊಂದಿಗೆ, ದೂರದಾರರ ಹೆಸರು, ಸಂಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಅಕ್ರಮ ನಡೆಯುತ್ತಿರುವ ಸ್ಥಳ ಹಾಗೂ ಸಂಕ್ಷಿಪ್ತ ವಿವರಗಳನ್ನು ಮಾದರಿ ನೀತಿ ಸಂಹಿತೆ ನಿರ್ವಹಣೆಯ ವಾಟ್ಸ್‌ಆ್ಯಪ್‌ ಸಂಖ್ಯೆ 9632169028 ದೂರು ಸಲ್ಲಿಸಬಹುದು ಎಂದು ರೋಹಿಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT