ವಿಜಯಪುರ: ನಗರದ ಇಬ್ರಾಹಿಂಪುರ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭವಾಗಿ ಮೂರು ವರ್ಷವಾದರೂ ಪೂರ್ಣವಾಗದೇ ಇರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷವು ’ಬಂಗಾರ ಕೊಡುಗೆ’ ಎಂಬ ವಿಶೇಷ ರೀತಿಯ ಹೋರಾಟ ನಡೆಸಲು ಮುಂದಾಗಿದೆ.
ರೈಲ್ವೆ ಮೇಲ್ಸೇತುವೆ ಕಾಮಗಾರಿಯು ಮುಗಿಯಲು ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಎದುರಾಗಿರಬಹುದು. ಈ ಕಾರಣಕ್ಕೆ ಎಎಪಿ ಕಾರ್ಯಕರ್ತರು ರೈಲ್ವೆ ಗೇಟಿನ ಮುಂದೆ ಹಾದು ಹೋಗುವ ಪ್ರತಿ ವ್ಯಕ್ತಿಯಿಂದ ₹ 1ರಂತೆ ಸುಮಾರು 1 ಲಕ್ಷ ಜನರಿಂದ ಕಾಣಿಕೆಯ ರೂಪದಲ್ಲಿ ಸಂಗ್ರಹಿಸಿ, ಆ ಹಣದಲ್ಲಿ ಎರಡು ತೊಲೆ ಬಂಗಾರ ಖರೀದಿ ಮಾಡಿ, ಒಂದು ತೊಲೆ ಬಂಗಾರವನ್ನು ಗುತ್ತಿಗೆದಾರನಿಗೆ ಮತ್ತು ಇನ್ನೊಂದು ತೊಲೆ ಬಂಗಾರವನ್ನು ರೇಲ್ವೆ ಸಚಿವರಿಗೆ ನೀಡಲು ವಿನೂತ ಹೋರಾಟ ಆರಂಭಿಸಲಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಡಾ.ಬಿ.ಎಂ. ಬಿರಾದಾರ ತಿಳಿಸಿದರು.
ಮೂರು ವರ್ಷಗಳಿಂದ ಕಾಮಗಾರಿ ನೆಪದಲ್ಲಿ ವಿಜಯಮರ ಜನರಿಗೆ ನೀಡಿದ ಕಿರುಕುಳ ತಡೆಯಲಾರದಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಇಬ್ಬರಿಗೂ ಶೀಘ್ರದಲ್ಲೇ ಬಂಗಾರ ರವಾನಿಸಲಾಗುವುದು ಎಂದರು.
ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವಂತೆ ಹಲವಾರು ಬಾರಿ ಮಾಡಿದಹೋರಾಟಕ್ಕೆ ಸ್ಪಂದಸಿದ್ದ ಜಿಲ್ಲಾಡಳಿತವು ನವೆಂಬರ್ 1ರಂದು ಉದ್ಘಾಟನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಇದೀಗ ನವೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಗಡುವು ನೀಡಿದ್ದಾರೆ. ಆದರೆ, ನಡೆಯುತ್ತಿರುವ ಸದ್ಯದ ಕಾಮಗಾರಿಯನ್ನು ನೋಡಿದರೆ ನವೆಂಬರ್ ಅಂತ್ಯದೊಳಗೆ ಮುಗಿಯುವ ಹಾಗೆ ಕಾಣುತ್ತಿಲ್ಲ ಎಮದು ಅವರು ತಿಳಿಸಿದರು.
ಕಾಮಗಾರಿವಿಳಂಬಕ್ಕೆ ಸರ್ಕಾರ ಹೊಣೆಯೋ ಅಥವಾ ಗುತ್ತಿಗೆದಾರರು ಹೊಣೆಯೋ ಎಂಬುದು ತಿಳಿಯದಾಗಿದೆ. ಈ ವಿಳಂಬ ನೀತಿಗೆ ಜಿಲ್ಲಾಡಳಿತ, ಸಂಸದರು ಸಾರ್ವಜನಿಕರಿಗೆ ಸ್ಪಷ್ಟ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಎಎಪಿ ನಗರ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಕೆಂಗನಾಳ, ನಗರ ಅಧ್ಯಕ್ಷ ಭೋಗೇಶ ಸೋಲಾಪೂರ, ಉಪಾಧ್ಯಕ್ಷ ನಿಹಾದ್ ಅಹ್ಮದ ಗೋಡಿಹಾಳ, ಹಫೀಜ್ ಸಿದಕಿ, ಅಬ್ದುಲ ರಹೀಮ ಜತ್ತ, ನಾರಾಯಣ ಸಂಸ್ಥಾನಿಕ, ಫಯಾಜ ಬಿರಾದಾರ, ಭಾಶಾ ಪಠಾಣ ಇದ್ದರು.