ಆಲಮಟ್ಟಿ(ವಿಜಯಪುರ): ಕೃಷ್ಣಾ ನದಿಯ ಹರಿವು ಹೆಚ್ಚಿದ್ದು, ಶನಿವಾರ ಒಂದೇ ದಿನ ಜಲಾಶಯಕ್ಕೆ 13 ಟಿಎಂಸಿ ಅಡಿ ನೀರು (1,51,598 ಕ್ಯುಸೆಕ್) ಹರಿದು ಬಂದಿದೆ.
ಆಗಸ್ಟ್ 6 ರಿಂದ 8ರ ವರೆಗೆ ಜಲಾಶಯಕ್ಕೆ 30 ಟಿಎಂಸಿ ಅಡಿಯಷ್ಟು ನೀರು ಹರಿದು ಬಂದಿದೆ. ಇನ್ನೂ ಮೂರ್ನಾಲ್ಕು ದಿನಗಳ ಕಾಲ ಲಕ್ಷ ಕ್ಯುಸೆಕ್ ಗೂ ಹೆಚ್ಚು ಒಳಹರಿವು ಇರಲಿದೆ.
ಶನಿವಾರ ಜಲಾಶಯದ ಒಳಹರಿವು 1.70 ಲಕ್ಷ ಕ್ಯುಸೆಕ್ಗೆ ಏರಿದ್ದರಿಂದ ಹೊರಹರಿವನ್ನು 2.20 ಲಕ್ಷ ಕ್ಯುಸೆಕ್ಗೆ ಏರಿಸಲಾಯಿತು. ಜಲಾಶಯದ ಎಲ್ಲ 26 ಗೇಟ್ಗಳ ಮೂಲಕ ನೀರನ್ನು ಬಿಡಲಾಗುತ್ತಿದೆ.
ಜಲಾಶಯದ ಮುಂಭಾಗದ ಅರಳದಿನ್ನಿ ಗ್ರಾಮದ ಕೆಲ ಜಮೀನು ಜಲಾವೃತಗೊಂಡಿದೆ. ಸೂರ್ಯಕಾಂತಿ, ಜೋಳ, ಕಬ್ಬು ಬೆಳೆ ನೀರಿನಲ್ಲಿ ನಿಂತಿವೆ.
519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.81 ಮೀ. ವರೆಗೆ ನೀರು ಸಂಗ್ರಹವಾಗಿದೆ. ಜಲಾಶಯದಲ್ಲಿ 95 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಜಲಾಶಯದ ಭರ್ತಿಗೆ ಇನ್ನೂ 28 ಟಿಎಂಸಿ ಅಡಿ ನೀರು ಅಗತ್ಯವಿದೆ.ಜಲಾಶಯದ ವಿದ್ಯುತ್ ಉತ್ಪಾದನೆ ಯಥಾಸ್ಥಿತಿ ಮುಂದುವರೆದಿದ್ದು, 250 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.