ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡದಲ್ಲಿ ನಿಷೇಧದ ನಡುವೆಯೂ ಬುಧವಾರ ಕದ್ದುಮುಚ್ಚಿ ನಡೆದ ಶ್ರೀ ಪವಾಡ ಬಸವೇಶ್ವರ ಜಾತ್ರೆಯ ಸಂದರ್ಭದಲ್ಲಿ ತೇರನ್ನು ಎಳೆಯುವಾಗ ತೇರಿನ ಚಕ್ರದ ಕೆಳಗೆ ಸಿಲುಕಿ ಅದೇ ಗ್ರಾಮದ ಕರಿಯಪ್ಪ ಕಿಲ್ಲೇದ (45) ಸಾವನ್ನಪ್ಪಿದ್ದಾರೆ.
ದೇವಸ್ಥಾನ ಕಮಿಟಿಯವರು ಜಾತ್ರೆ ರದ್ದು ಮಾಡಿದ್ದು ಸಾರ್ವಜನಿಕರಾರೂ ಜಾತ್ರೆಗೆ ಬರಬಾರದು ಎಂದು ಪ್ರಕಟಣೆ ಹೊರಡಿಸಿದ್ದರು. ಆದರೆ, ಬುಧವಾರ ಮಧ್ಯಾಹ್ನ ಪೊಲೀಸರ ಕಣ್ತಪ್ಪಿಸಿ ತೇರನ್ನು ಎಳೆಯುವಾಗ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಡಿವೈಎಸ್ಪಿ ಅರುಣ ಕೋಳೂರ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ನಡೆಸಿದ ದೇವಸ್ಥಾನ ಕಮಿಟಿಯವರ ಮೇಲೆ ಪ್ರಕರಣ ದಾಖಲಿಸುವ ಕುರಿತು ಮುದ್ದೇಬಿಹಾಳ ಪೊಲೀಸರು ಕಾನೂನು ಕ್ರಮ ಕೈಕೊಂಡಿದ್ದಾರೆ.