ವಿಜಯಪುರ: ಭಾರತ ದೇಶದ ನೈಜವಾದ ಇತಿಹಾಸವನ್ನು ಹಾಗೂ ಸ್ವಾತಂತ್ಯ ಹೋರಾಟದ ಬಲಿದಾನವನ್ನು ಇಂದಿನ ಯುವಶಕ್ತಿ ತಿಳಿದುಕೊಳ್ಳಬೇಕು ಎಂದು ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ನಗರದ ಮೀನಾಕ್ಷಿ ಚೌಕಿಯ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಭಗತಸಿಂಗ್, ರಾಜಗುರು, ಸುಖದೇವ ಅವರ ಹುತ್ತಾತ್ಮ ದಿನದ ಅಂಗವಾಗಿ ‘ಉಘೇ ವೀರಭೂಮಿ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ವಕ್ತಾರರಾಗಿ ಮಾತನಾಡಿದರು.
ತಮ್ಮ ಚಿಕ್ಕ ವಯಸ್ಸಿನಲ್ಲೆ ದೇಶದ ಸ್ವತಂತ್ರ ಹೋರಾಟದಲ್ಲಿ ಅತಂತ್ಯ ಕಾಂತ್ರಿಕಾರಕ ಹೆಜ್ಜೆಯನ್ನು ಮೂಡಿಸಿದ ವ್ಯಕ್ಕಿಗಳನ್ನು ಸ್ಮರಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ತಾವೂ ನೇಣಿನ ಕಂಬಕ್ಕೆ ಏರುವ ಸಂದರ್ಭದಲ್ಲಿಯೂ ಸಹಿತ ನಗುನಗುತ್ತಾ ನೇಣೆಗೆರಿದ ವ್ಯಕ್ತಿಗಳು ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಧೈರ್ಯ ಹಾಗೂ ಅವರಿಗಿರುವ ಭಾರತ ದೇಶದ ಬಗೆಗಿನ ದೇಶಭಕ್ತಿ ನಮ್ಮೆಲ್ಲರಿಗೂ ಪ್ರೇರಣೆ ಎಂದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಮಣಿಕಂಠ ಕಳಸ ಮಾತನಾಡಿ, ಮಾರ್ಚ್ 23 ಹುತಾತ್ಮರ ದಿನ, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ದಿನ. ಭಾರತದ ದೇಶಪ್ರೇಮಿ ಭಗತ್ ಸಿಂಗ್, ರಾಜಗುರು ,ಸುಖದೇವ್ ಅವರನ್ನು ಸ್ಮರಿಸಿ ಇಂಥವರ ತ್ಯಾಗ ಬಲಿದಾನಗಳು ತಲೆತಲಾಂತರದ ವರೆಗೆ ಸ್ಪೂರ್ತಿಯಾಗಿ ಉಳಿಯುವ ದಿನ ಎಂದರು.
ಸ್ವಾತಂತ್ರ್ಯದ ಕ್ರಾಂತಿಕಾರಿಗಳ ತ್ಯಾಗ-ಬಲಿದಾನ ದೇಶದ ಯುವಪೀಳಿಗೆಗೆ ಸ್ಪೂರ್ತಿಯಾಗಿ ಉಳಿಯಬೇಕು, 1931 ರಲ್ಲಿ ಬ್ರಿಟಿಷ್ ಸರ್ಕಾರದಿಂದ ಗಲ್ಲಿಗೇರಿಸಲ್ಪಟ್ಟ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರಿಗೆ ಗೌರವ ಸಲ್ಲಿಸುವ ದಿನ ಎಂದರು.
ಎಬಿವಿಪಿಯ ವಿಭಾಗ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು, ಶೈಕ್ಷಣಿಕ ಕ್ಷೇತ್ರದ ಕುಂದುಕೊರತೆಗಳನ್ನು ಚರ್ಚೆಯ ಮುನ್ನೆಲೆಗೆ ತರುವುದರಲ್ಲಿ ಹಾಗೂ ಶಾಶ್ವತ ಪರಿಹಾರಗಳನ್ನು ಒದಗಿಸುವುದರಲ್ಲಿ ಎಬಿವಿಪಿ ಮುಂಚೂಣಿಯಲ್ಲಿದೆ ಎಂದರು.
ದೇಶದ ಪ್ರತಿ ರಾಜ್ಯದಲ್ಲಿ, ಪ್ರತಿ ಜಿಲ್ಲೆಯ ಕಾಲೇಜುಗಳಲ್ಲಿ, ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ ತಡೆಯಲು, ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು, ವಿದ್ಯಾರ್ಥಿಗಳ ಹಿತಕಾಯಲು, ಚಾರಿತ್ರ್ಯವಂತ ಸಮಾಜ ಕಟ್ಟಲು ಹಾಗೂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯನ್ನು ಮೂಡಿಸಲು ಎಬಿವಿಪಿ ಕಟಿಬದ್ಧ ಎಂದರು.
ಮಾಜಿ ಸೈನಿಕರಾದ ಸಂಗನಗೌಡ ವಂದಾಲ, ಎಬಿವಿಪಿ ನಗರ ಅಧ್ಯಕ್ಷ ಅಮಿತ್ ಕುಮಾರ್ ಬಿರಾದಾರ, ಕಾರ್ಯದರ್ಶಿ ಸಿದ್ದು ಪತ್ತಾರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.