ವಿಜಯಪುರ: ವಿದ್ಯುತ್ ಕೇಬಲ್ ಅಳವಡಿಕೆಗೆ ಸಂಬಂಧಪಟ್ಟಂತೆ ₹10 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ವ್ಯವಸ್ಥಾಪಕ ರಾಜಶೇಖರ ಗಜಾಕೋಶ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಬಲೆಗೆ ಬಿದ್ದಿದ್ದಾರೆ.
ಸಿವಿಲ್ ಎಂಜಿನಿಯರ್ ಸಂಗಣ್ಣ ಎಂಬುವವರು ವಿದ್ಯುತ್ ಕೇಬಲ್ ಅಳವಡಿಸುವ ಕುರಿತು ಬಸ್ ನಿಲ್ದಾಣದ ಆವರಣದಲ್ಲಿ ಅನುಮತಿ ಇಲ್ಲದೇ ಗುಂಡಿ ತೋಡಿದ್ದರು. ಈ ಹಿನ್ನೆಲೆಯಲ್ಲಿ ₹ 20 ಸಾವಿರ ಕೊಡಿದ್ದರೆ ಕ್ರಮಕೈಗೊಳ್ಳುವುದಾಗಿ ಗಜಾಕೋಶ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಕೊನೆಗೆ ₹10 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಸಿಬಿ ಡಿವೈಎಸ್ಪಿ ಎಲ್.ವೇಣುಗೋಪಾಲ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಪಿಐ ಎಸ್.ಆರ್.ಗಣಾಚಾರಿ, ಹರಿಶ್ಚಂದ್ರ ಹಾಗೂ ಸಿಬ್ಬಂದಿ ಮಹೇಶ ಪೂಜಾರಿ, ಅಶೋಕ ಸಿಂಧೂರ, ಸುರೇಶ ಜಾಲಗೇರಿ, ಮದನಸಿಂಗ್ ರಜಪೂತ, ಈರಣ್ಣ ಕನ್ನೂರ, ಸದಾಶಿವ ಕೋಟ್ಯಾಳ, ಚನ್ನನಗೌಡ ಯಾಳವಾರ, ಮಾಳಪ್ಪ ಸಲಗೊಂಡ ಭಾಗವಹಿಸಿದ್ದರು.