ವೈರಾಗ್ಯ ಆಗಲೇ ಮಹಾದೇವಿಯಲ್ಲಿ ಅಳವಟ್ಟಿತ್ತು. ದಿನನಿತ್ಯ ಪೂಜೆಗೊಳ್ಳುವ ಮಲ್ಲಿಕಾರ್ಜುನನಿಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದಳು. ಇಂಥ ವೈರಾಗ್ಯದ ಮಹಾದೇವಿಯ ಸೌಂದರ್ಯಕ್ಕೆ ಸೋತು ರಾಜಾ ಕೌಶಿಕ ಬಲವಂತವಾಗಿ ಮದುವೆಯಾಗುತ್ತಾನೆ. ತಂದೆ-ತಾಯಿ ರಾಜನ ಭಯದಿಂದ ಮಗಳನ್ನು ಸಮಾಧಾನ ಪಡಿಸಿ ಕಳಿಸಲು ಮುಂದಾದಾಗ, ‘ಇಹಕ್ಕೊಬ್ಬ ಗಂಡ, ಪರಕ್ಕೊಬ್ಬ ಗಂಡನೇ? ಲೌಕಿಕಕ್ಕೊಬ್ಬ, ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ, ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವ ನನ್ನ ಗಂಡ’ ಎಂದು ಹೇಳುತ್ತಾಳೆ.