ವಿಜಯಪುರ: ನಗರದ ನೇತಾಜಿ ಸುಭಾಸಚಂದ್ರ ಬೋಸ್ ರಸ್ತೆಯ (ಅಥಣಿ ರಸ್ತೆ) ಅಲ್ ಅಮೀನ್ ಹಿಂಬಂದಿ ನಮೋ ನಗರದಲ್ಲಿ ಪ್ರಧಾನಮಂತ್ರಿ ಅವಾಸ ಯೋಜನೆಯಡಿ ನಿರ್ಮಾಣಗೊಂಡಿರುವ ಆಶ್ರಯ ಮನೆಗಳ ಹಂಚಿಕೆ ಪತ್ರಗಳನ್ನು ಜ.26ರಂದು ವಿತರಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ನಗರ ಮತಕ್ಷೇತ್ರ ವ್ಯಾಪ್ತಿಯ ಬಡವರಿಗೆ ಸ್ವಂತ ಸೂರು ಕಲ್ಪಿಸಲು ನಮೋ ನಗರದಲ್ಲಿ ಅಪಾರ್ಟ್ ಮೆಂಟ್ ಮೀರಿಸುವಂತೆ 1493 ಆಶ್ರಯ ಮನೆಗಳು ನಿರ್ಮಾಣವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತದಲ್ಲಿ ಶೇ 60ಕ್ಕಿಂತ ಹೆಚ್ಚು ವಂತಿಗೆ ಹಣ ತುಂಬಿರುವ 300 ಅರ್ಹ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಪತ್ರ ನೀಡಲಾಗುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಉಳಿದ ಫಲಾನುಭವಿಗಳು ಬಾಕಿ ವಂತಿಗೆ ಪಾವತಿಸಿ, ನಂತರ ದಿನಗಳಲ್ಲಿ ತಮ್ಮ ಮನೆ ಹಂಚಿಕೆ ಪತ್ರ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಇನ್ನೂ ಮನೆಗಳು ಬೇಕೆನ್ನುವರು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ₹2.37 ಲಕ್ಷ, ಸಾಮಾನ್ಯ ವರ್ಗದವರು ₹ 3.17 ಲಕ್ಷ ವಂತಿಗೆ ಹಣ ಭರಿಸಿ ಮನೆಗಳ ಸ್ವಂತ ಮಾಲೀಕರಾಗಬೇಕು ಎಂದು ನಗರ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.