ಆಲಮಟ್ಟಿ: ‘ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆಯನ್ನು ರಾಜ್ಯದ ನೌಕರರಿಗೆ ಮುಂದುವರಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.
ಇಲ್ಲಿಯ ಆರ್.ಬಿ.ಪಿ.ಜಿ. ಹಳಕಟ್ಟಿ ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿದ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ಪಿಂಚಣಿ ಎಂಬುದು ನೌಕರರ ಹಕ್ಕು. ಹಳೆ ನೀತಿ ಜಾರಿಗಾಗಿ ನೌಕರರು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ಸಂಪೂರ್ಣ ಬೆಂಬಲವಿದೆ. ಈಚೆಗೆ ಕೃಷ್ಣ ಭೈರೇಗೌಡರ ಹೇಳಿಕೆ ರಾಜ್ಯದಲ್ಲಿ ನೌಕರರಲ್ಲಿ ಆತಂಕ ಮೂಡಿಸಿದೆ. ಪಿಂಚಣಿ ಇದ್ದರೆ ನೌಕರರಿಗೆ ಶಕ್ತಿ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಅನುದಾನಿತ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರು, ನಿಗಮ ಮಂಡಳಿ, ಅರೆ ಸರ್ಕಾರಿ ನೌಕರರಿಗೂ ಒಪಿಎಸ್ ಜಾರಿಗೊಳಿಸಬೇಕು’ ಎಂದು ಹೇಳಿದರು.