ವಿಜಯಪುರ: ನಗರ ಸೇರಿದಂತೆಜಿಲ್ಲೆಯಾದ್ಯಂತ ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನೋತ್ಸವ ಪ್ರಯುಕ್ತ ಈದ್ ಮಿಲಾದುನ್ನಬಿ ಹಬ್ಬವನ್ನು ಶುಕ್ರವಾರ ಸಡಗರ, ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪ್ರತಿಬಾರಿ ನಡೆಯುವ ಜೂಲೂಸ್ (ಮೆರವಣಿಗೆ) ಈ ಬಾರಿಕೋವಿಡ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಹೀಗಾಗಿ ಯಾವೊಂದು ಸಂಘಟನೆಗಳು ಜೂಲೂಸ್ ನಡೆಸಲಿಲ್ಲ. ಈದ್ ಮಿಲಾದ್ನ್ನಬಿ ಹಬ್ಬ ಮನೆಗೆ ಸೀಮಿತವಾಗಿತ್ತು.
ಪ್ರವಾದಿ ಹಜರತ್ ಮಹಮ್ಮದ್ ಪೈಗಂಬರ್ ಅವರ ಕೇಶಗಳ ಇರಿಸಿರುವ ಆಸಾರ್ ಮಹಲ್ನಲ್ಲಿ ಈದ್ಮಿಲಾದುನ್ನಬಿ ಹಬ್ಬದ ಪ್ರಯುಕ್ತ ಪವಿತ್ರ ಗಂಧದ (ಸಂದಲ್) ಹಾಗೂ ಉರುಸ್ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಪ್ರತಿವರ್ಷ ಉರುಸ್ ಹಾಗೂ ಸಂದಲ್ ಸಂದರ್ಭದಲ್ಲಿ ಲಕ್ಷಾಂತರ ಜನರು ಆಸಾರ್ ಮಹಲ್ನಲ್ಲಿ ಪ್ರವಾದಿ ಅವರ ಪವಿತ್ರ ಕೇಶಗಳನ್ನು ಇರಿಸಿರುವ ಪೆಟ್ಟಿಗೆಗಳ ದರ್ಶನ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಕೆಲವೇ ಕೆಲವು ಜನರು ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿಕೊಂಡು ಈ ಸಂಪ್ರದಾಯ ನೆರವೇರಿಸಿದರು.
ಮುಖಂಡರಾದ ಅಬ್ದುಲ್ಹಮೀದ್ ಮುಶ್ರೀಫ್, ಮಹಿಬೂಬ್ಪೀರಾ ಮುಶ್ರೀಫ್, ಮಾಜಿ ಮೇಯರ್ ಸಜ್ಜಾದೆಪೀರಾ ಮುಶ್ರೀಫ್, ಇಸಾಖಾದ್ರೀ ಮುಶ್ರೀಫ್ ಸೇರಿದಂತೆ ಸಂಪ್ರದಾಯದಂತೆ ಮುಶ್ರೀಫ್ ಕುಟುಂಬದ ಸದಸ್ಯರು ಪೆಟ್ಟಿಗೆ ಇರಿಸಿರುವ ಬಾಗಿಲುಗಳ ಕೀಲಿಗಳನ್ನು ತೆರೆದರು.
ಉರುಸ್ ಅಂಗವಾಗಿ ಇಷ್ಟಾರ್ಥಗಳ ನೆರವೇರಿಕೆಗಾಗಿ ಪ್ರಾರ್ಥಿಸಿ ಆಸಾರ್ ಮಹಲ್ನಲ್ಲಿರುವ ಹೊಂಡದಲ್ಲಿ ಪುಟ್ಟ-ಪುಟ್ಟ ಜಹಾಜ್ಗಳನ್ನು ತೇಲಿ ಬಿಟ್ಟರು. ಆಸಾರ್ ಮಹಲ್ ಅನ್ನು ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು.