ವಿಜಯಪುರ: ತ್ಯಾಗ, ಸಹೋದರತ್ವ ಸಾರುವ ಬಕ್ರೀದ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಆಚರಿಸಲಾಗುತ್ತಿದೆ.
ಹೊಸ ಬಟ್ಟೆ ತೊಟ್ಟ ಮುಸ್ಲಿಮರು ಬೆಳಿಗ್ಗೆಯೇ ಮಸೀದಿ, ದರ್ಗಾಗಳಿಗೆ ತೆರಳಿ ಬಕ್ರೀದ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಶೇ 50 ಜನರಿಗೆ ಮಾತ್ರ ಮಸೀದಿ, ದರ್ಗಾಗಳ ಒಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪಾಳಿ ಪ್ರಕಾರ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿದೆ. ಈದ್ಗಾ ಮೈದಾನ, ಮಸೀದಿ, ದರ್ಗಾಗಳ ಬಳಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿದೆ.
ಮುಸ್ಲಿಮರು ಖಬರ ಸ್ಥಾನಗಳಿಗೆ ತೆರಳಿ ತಮ್ಮ ಕುಟುಂಬದ ಹಿರಿಯರ ಸಮಾಧಿಗಳಿಗೆ ನಮಿಸಿದರು. ಕುರಿ, ಆಡು, ಹೋತಗಳನ್ನು ಕುರ್ಬಾನಿ ನೀಡುವ ದೃಶ್ಯ ಕಂಡುಬಂದಿತು. ಮನೆಗಳಲ್ಲಿ ಮಾಂಸಾಹಾರ, ಸಿಹಿ ಪದಾರ್ಥಗಳ ತಯಾರಿಯಲ್ಲಿ ಮಹಿಳೆಯರು ತೊಡಗಿದ್ದು, ಮಧ್ಯಾಹ್ನ ಕುಟುಂಬ, ಬಂಧು ಬಳಗದವರೊಟ್ಟಿಗೆ ಸವಿಯಲಿದ್ದಾರೆ.
ಕೋವಿಡ್ ನಿರ್ಬಂಧ ಇರುವುದರಿಂದ ಹೆಚ್ಚು ಜನ ಗುಂಪುಗೂಡದಂತೆ ಕ್ರಮ ವಹಿಸಲಾಗಿದೆ.