ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಮಾಜ ಸುಧಾರಕ, ಕ್ರಾಂತಿಕಾರಿ ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಆಚರಿಸಲಾಯಿತು.
ಕೋವಿಡ್ ನಿರ್ಬಂಧವಿರುವ ಕಾರಣ ಎಲ್ಲಿಯೂ ವೇದಿಕೆ ಕಾರ್ಯಕ್ರಮಗಳು ನಡೆಯಲಿಲ್ಲ. ಸರ್ಕಾರಿ, ಕಚೇರಿ, ಸಂಘ, ಸಂಸ್ಥೆಗಳ ಕಚೇರಿ ಹಾಗೂ ನಗರ, ಪಟ್ಟಣಗಳ ಪ್ರಮುಖ ವೃತ್ತದಲ್ಲಿ ಇರುವ ಬಸವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಲಾಯಿತು.
ವಿಜಯಪುರ ನಗರದ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಮೂರ್ತಿಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಮಾಲಾರ್ಪಣೆ ಮಾಡಿದರು.
ವಾಟ್ಸ್ ಆ್ಯಪ್, ಫೇಸ್ಬುಕ್, ಸಾಮಾಜಿಕ ಜಾಲತಾಣದಲ್ಲಿ ಬಸವ ಜಯಂತಿ, ಅಕ್ಷಯ ತೃತೀಯ ಶುಭಾಷಯಗಳು, ಬಸವಣ್ಣನ ವಚನಗಳನ್ನು ಒಳಗೊಂಡ ಪೋಸ್ಟರ್ಗಳು ಹರಿದಾಡಿದವು.
ಅಕ್ಷಯ ತೃತೀಯ ಅಂಗವಾಗಿ ಮಹಿಳೆಯರು ಮನೆಯಲ್ಲೇ ಬಂಗಾರವನ್ನು ದೇವರ ಮುಂದಿಟ್ಟು ಪೂಜಿಸಿದರು. ಎಲ್ಲ ಚಿನ್ನಾಭರಣ ಮಳಿಗೆಗಳು ಬಂದ್ ಆಗಿರುವುದರಿಂದ ಖರೀದಿ ನಡೆಯಲಿಲ್ಲ. ಬ್ರಾಂಡೆಂಡ್ ಕಂಪನಿಗಳು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿ ಗ್ರಾಹಕರ ಮನೆ ಬಾಗಲಿಗೆ ತಲುಪಿಸುವ ವ್ಯವಸ್ಥೆ ಮಾಡಿದವು.