ವಿಜಯಪುರ: ಕಲಬುರ್ಗಿ ಜಿಲ್ಲೆಯ ಸೊನ್ನಾ ಬ್ಯಾರೇಜ್ನಿಂದ 7.8 ಲಕ್ಷ ಕ್ಯೂಸೆಕ್ ನೀರನ್ನು ಭೀಮಾ ನದಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಸಿಂದಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರವಾಹ ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗಾಗಿ ಜಿಲ್ಲೆಗೆ ಎರಡು ಎನ್ಡಿಆರ್ಎಫ್ ತಂಡಗಳು ಬಂದಿವೆ.
ತಲಾ 18 ಜನರಿರುವ ಎನ್ಡಿಆರ್ಎಫ್ ತಂಡದೊಂದಿಗೆ ಎರಡು ಬೋಟ್ಗಳಿವೆ.
ಜಲಾವೃತವಾಗಿರುವ ತಾರಾಪುರ ಗ್ರಾಮದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದರು.
ಸಿಂದಗಿ ತಾಲೂಕಿನ ದೇವಣಗಾಂವ, ಕಡ್ಲೇವಾಡ, ಬ್ಯಾಡಗಿಹಾಳ, ಶಂಬೇವಾಡ, ಕುಮಸಗಿ, ಗ್ರಾಮವನ್ನು ಭೀಮಾ ನದಿ ಸುತ್ತು ವರೆದಿದೆ.
ದೇವಣಗಾಂವ ಗ್ರಾಮದ ಬಸ್ ನಿಲ್ದಾಣದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಮುಳುಗಿದೆ.
ಗ್ರಾಮವನ್ನು ಸುತ್ತು ವರೆದಿರುವ ಪ್ರವಾಹ ಜನರಲ್ಲಿ ಆತಂಕ ಮೂಡಿಸಿದೆ.
ಬಸ್ ನಿಲ್ದಾಣದ ಸಮೀಪದ ಹನುಮಾನ ದೇವಸ್ಥಾನ , ಅಂಬಿಗರ ಚೌಡಯ್ಯ ವೃತ್ತ, ಬಸವೇಶ್ವರ ವೃತ್ತ , ಕನಕದಾಸ ವೃತ್ತ ನೀರಿನಿಂದ ಆವೃತವಾಗಿವೆ.
300 ಕ್ಕೂ ಹೆಚ್ಚು ಮನೆಗಳಿ ನೀರು ನುಗ್ಗಿದೆ. ಮುಖ್ಯ ವ್ಯಾಪಾರ ಕೇಂದ್ರ ಆಗಿರುವ ಬಸ್ ನಿಲ್ದಾಣ ಬಸವೇಶ್ವರ ವೃತ್ತದಲ್ಲಿ ಅಂಗಡಿ, ಹೋಟೆಲ್ಗಳಲ್ಲಿ ನೀರು ಏಕಾಏಕಿ ನುಗ್ಗಿದ ಪರಿಣಾಮ ವ್ಯಾಪಾರಿಗಳು ಪರದಾಡುತ್ತಿದ್ದಾರೆ