ವಿಜಯಪುರ: ಮತಕ್ಕಾಗಿ ಹಿಜಾಬ್, ಹಲಾಲ್, ಆಜಾನ್ ಹಾಗೂ ಜಾತ್ರೆ ಮತ್ತು ದೇವಸ್ಥಾನಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧದಂತಹ ವಿವಾದಗಳು ಬಿಜೆಪಿಗೆ ತಿರುಗುಬಾಣವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಎಚ್ಚರಿಕೆ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಸಂಘ ಪರಿವಾರದ ಈ ಅತಿರೇಕಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಲಿದೆ.ಕೈಗಾರಿಕೆಗಳು, ಉದ್ಯಮಿಗಳು ರಾಜ್ಯಕ್ಕೆ ಬರಲು ಹಿಂಜರಿಯುತ್ತಾರೆ ಎಂದು ಹೇಳಿದರು.
ಇಂಥ ವಿವಾದಗಳ ಪರಿಣಾವವಾಗಿಯೇ ಇಂದಿಗೂಹೈದರಾಬಾದ್, ಬೆಳಗಾವಿಯಂತಹ ನಗರಗಳಿಗೆ ಕೈಗಾರಿಕೆಗಳು ಹಾಗೂ ಉದ್ಯಮಿಗಳು ಬರುತ್ತಿರಲಿಲ್ಲ ಎಂದರು.
ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ.ಇಂಥ ವಿವಾದಗಳನ್ನು ಸಾಮರಸ್ಯದಿಂದ ಬಗೆ ಹರಿಸಬೇಕು. ಬಿಜೆಪಿಯ ಅತಿರೇಕದ ವರ್ತನೆ ಸಹಿಸಲಾಗದು ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಯುವಕನ ಹತ್ಯೆ ವಿಚಾರದಲ್ಲಿ ಗೃಹ ಸಚಿವರ ಅರಗ ಜ್ಞಾನೇಂದ್ರ ಅವರ ವಿವಾದಾತ್ಮಕ, ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಯಾರೋ ನೀಡಿದ ಹೇಳಿಕೆಯನ್ನು ಹೇಳಿದ್ದಾರೆ ಎಂದರು.
ಕೋಮು ಸೌಹಾರ್ದವನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ಬದುಕನ್ನು ಕಟ್ಟೋ ಕೆಲಸವಾಗಬೇಕು. ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ.ಸರ್ಕಾರದ ಕಳಿ ಹಣವಿಲ್ಲ.ಹಸಿದವರಿಗೆ ಅನ್ನ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ಮುಚ್ಚಿಹಾಕಲು ಭಾವನಾತ್ಮಕ ವಿಚಾರಗಳನ್ನು ಕೆದುಕುತ್ತಿದೆ. ಯಾವುದೇ ಕಾರಣಕ್ಕೂ ಭಾರತ ಶ್ರೀಲಂಕಾ ಆಗಬಾರದು ಎಂದು ಹೇಳಿದರು.
ರಾಜ್ಯ ಸರ್ಕಾರ ₹ 5ಲಕ್ಷ ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದೆ. ಎಲ್ಲ ಇಲಾಖೆಯಲ್ಲೂ ಶೇ 40 ರಷ್ಟು ಹುದ್ದೆಗಳು ಖಾಲಿ ಇವೆ. ಅವನ್ನು ಭರ್ತಿ ಮಾಡಿಲ್ಲ ಎಂದರು.
ಸರ್ಕಾರ 40 ಪರ್ಸೆಂಟೇಜ್ ಸರ್ಕಾರ ಎಂದು ಗುತ್ತಿಗೆದಾರರೇ ಹೇಳಿದ್ದಾರೆ. ನಖಾವೋಂಗಾ, ನ ಖಾನೇದೋಂಗಾ ಎನ್ನುವ ಪ್ರಧಾನಿ ಈ ವಿಷಯದಲ್ಲಿ ಏಕೆ ಮೌನವಾಗಿದ್ದಾರೆ.ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಪ್ರಧಾನಿ ಕಂಡೂ ಕಾಣದಂತೆ ಇದ್ದಾರೆ. ಬೇರೆಯವರಾದರೆ ಸಿಬಿಐ ತನಿಖೆ ಮಾಡಿಸುತ್ತಾರೆ ಎಂದು ಆರೋಪಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 140 ಸ್ಥಾನಗಳಲ್ಲಿ ಜಯ ಗಳಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.