ವಿಜಯಪುರ: ನಗರದ ಅಲ್ –ಅಮೀನ್ ವೈದ್ಯಕೀಯ ಕಾಲೇಜು ಆಡಳಿತ ವರ್ಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಮಾ.28ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅಲ್ ಅಮೀನ್ ಕಾರ್ಮಿಕ ಸಂಘದ ಅಧ್ಯಕ್ಷ ಮುಜಾಹಿದ್ ಎಲ್.ಅವಟಿ ತಿಳಿಸಿದರು.
ಮುಜಾಹಿದ್ ಎಲ್.ಅವಟಿ
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕೈದು ತಿಂಗಳಿಂದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ಆಡಳಿತ ವರ್ಗ ಕಾರ್ಮಿಕ ವಿರೋಧಿ, ಸಂಘಟನಾ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಕ್ಷುಲ್ಲಕ ಕಾರಣಗಳಿಗೆ ಕಾರ್ಮಿಕರಿಗೆ ಕಿರುಕುಳ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಸಂಕಷ್ಟದ ಕಾಲದಲ್ಲಿ ಸ್ವಂತ ಆರೋಗ್ಯ, ರಕ್ಷಣೆಗಳನ್ನು ಲೆಕ್ಕಿಸದೆ ದುಡಿದ ನೌಕರರಿಗೆ ವಾರ್ಷಿಕ ಇನ್ಕ್ರಿಮೆಂಟ್ ಕೊಡದೆ ಕಿರುಕುಳ ನೀಡಿದ್ದಾರೆ. ಇದನ್ನು ಪ್ರಶ್ನಿಸಿದ ಸಂಘದ ಎಲ್ಲ ಪದಾಧಿಕಾರಿಗಳನ್ನು ಅಮಾನತು ಮಾಡಿ, ಸುಳ್ಳು ಆರೋಪಗಳ ಮೇಲೆ ವಿಚಾರಣೆಗೆ ಆದೇಶಿಸಿದ್ದಾರೆ ಎಂದು ಹೇಳಿದರು.
ಆಡಳಿತ ವರ್ಗ ಕಾರ್ಮಿಕ ಇಲಾಖೆಯ ಆದೇಶವನ್ನು ಧಿಕ್ಕರಿಸಿ ನೆಲದ ಕಾನೂನಿಗೆ ಗೌರವ ಕೊಡದೆ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿದರು.
ಕಾರ್ಮಿಕ ಮುಖಂಡರಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು. ನೌಕರರ ವಾರ್ಷಿಕ ಇನ್ಕ್ರಿಮೆಂಟ್ ಪಾವತಿಸಬೇಕು. ಆಸ್ಪತ್ರೆಯಲ್ಲಿ ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಮೂಡಿಸಬೇಕು, ಸಂಘದ ಜೊತೆ ಮುಂದಿನ ವೇತನ ಪರಿಷ್ಕರಣೆ ಚರ್ಚಿಸಿ ಒಪ್ಪಂದ ಮಾಡಬೇಕು ಎಂದು ಆಗ್ರಹಿಸಿದರು.
ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯ ಭಾಸ್ಕರ್, ಸಿಪಿಐ ಜಿಲ್ಲಾ ಸಂಚಾಲಕ ಪ್ರಕಾಶ ಹಿಟ್ನಳ್ಳಿ, ಐ.ಎಂ.ಮುಶ್ರೀಫ್, ಜಾಕೀರ್ ಹುಸೇನ್ ನಾಯ್ಕೋಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.