ವಿಜಯಪುರ:ಕೋವಿಡ್ನಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಪ್ ಆರೋಪಿಸಿದರು.
ನಗರದ ವಾರ್ಡ್ ನಂ.13 ಹಾಗೂ 33ರಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ನಿರ್ಲಕ್ಷದಿಂದ ರಾಜ್ಯದಲ್ಲಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಹೆಸರಲ್ಲಿ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದು, ಜನರ ಹಿತ ಕಾಪಾಡುವಲ್ಲಿ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ದೂರಿದರು.
ಕೊರೊನಾ ರೋಗ ಇಡೀ ಮಾನವ ಜಗತ್ತಿಗೆ ಒಂದು ಕಂಟಕವಾಗಿದ್ದು, ಇದನ್ನು ಹೇಗೆ ತಡೆಯಬೇಕೆನ್ನುವ ನಿಟ್ಟಿನಲ್ಲಿ ಜನತೆ ಸರ್ಕಾರದ ಮಾರ್ಗಸೂಚಿಯಂತೆ ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಕಾಯಿಲೆಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು, ಯಾರು ಇದನ್ನು ನಿರ್ಲಕ್ಷಿಸಬಾರದು ಎಂದರು.
ಕೋವಿಡ್ಗೆ ಜನ ಭಯಪಡುವ ಅಗತ್ಯವಿಲ್ಲ, ಭಯಪಟ್ಟು ಎಷ್ಟೋ ಜನ ಇಂದು ಸಾವಿಗೀಡಾಗುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಆರೋಗ್ಯ ಹಸ್ತ ಕಾರ್ಯಕ್ರಮದ ಮೂಲಕ ಮನೆ-ಮನೆಗಳಿಗೆ ತೆರಳಿ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ತಿಳಿಹೇಳಿ ಆಸ್ಪತ್ರೆಗೆ ಕಳುಹಿಸಿ, ಜೀವ ರಕ್ಷಣೆ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ವಾರಿಯರ್ಸ್ ವಿಜಯಪುರ ನಗರ ಮತಕ್ಷೇತ್ರದ ಪ್ರತಿಯೊಂದು ಮನೆ-ಮನೆಗೆ ತೆರಳಿ ಜನರ ಜೀವದ ರಕ್ಷಣೆ ಮಾಡುವಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಅಬ್ದುಲ್ ರಜಾಕ್ ಹೊರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರ ಚಾಂದಸಾಬ ಗಡಗಲಾವ, ನಗರ ಬ್ಲಾಕ್ ಅಧ್ಯಕ್ಷ ಜಮೀರ್ಅಹ್ಮದ್ ಬಕ್ಷೀ, ಆರತಿ ಶಹಾಪೂರ, ಇಲಿಯಾಸ್ ನಾಗರಬಾವಡಿ, ಅಲ್ತಾಫ್ ಅಸ್ಕಿ, ವಸಂತ ಹೊನಮೊಡೆ ಇದ್ದರು.