ಕಲಕೇರಿ: ಮಠಗಳು ತಲೆತಲಾಂತರಗಳಿಂದ ಪುರಾಣ ಪುಣ್ಯಕಥೆಗಳು ಮತ್ತು ಉತ್ತಮ ಸಂಸ್ಕಾರ ಬೋಧನೆಯಿಂದ ಜನರ ಜೀವನದಲ್ಲಿ ಉತ್ತಮ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಬಿತ್ತರಿಸುವ ಮೂಲಕ ಅವರ ಜೀವನಮಟ್ಟವನ್ನು ಸುಧಾರಿಸುತ್ತಾ ಬಂದಿರುವ ಹೆಮ್ಮೆ ಇದೆ ಎಂದು ಉಜ್ಜಯಿನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರರ ನೂತನ ತೇರಿನ ಲೋಕಾರ್ಪಣೆ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆ, ಉಚಿತ ಸಾಮೂಹಿಕ ವಿವಾಹ, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹ ಮಾಡಿಕೊಳ್ಳುವವರು ಬಡವರು ನಿರ್ಗತಿಕರಲ್ಲ ಅವರು ಅದೃಷ್ಟವಂತರು ಮತ್ತು ಭಾಗ್ಯವಂತರಾಗಿದ್ದಾರೆ. ಇದಕ್ಕೆಲ್ಲ ಅದೃಷ್ಟ ಮಾಡಿರಬೇಕು ಎಂದರು.
ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ, ರಾಷ್ಟ್ರೀಯ ಸಂಪತ್ತನ್ನು ಉಳಿಸಿದಂತಾಗುತ್ತದೆ ಆದ್ದರಿಂದ ಎಲ್ಲರೂ ಸಾಮೂಹಿಕ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಜಾಲಹಳ್ಳಿಯ ಜಯಶಾಂತಲಿಂಗೇಶ್ವರ ಶಿವಾಚಾರ್ಯರು, ಹಿರೂರು ಹಿರೇಮಠದ ಜಯಸಿದ್ಧೇಶ್ವರ ಶಿವಾಚಾರ್ಯರು, ಪಂ.ರಾಜಗುರು ಗುರುಸ್ವಾಮಿ ಗವಾಯಿಗಳು ಕಲಕೇರಿ, ವಡಗೇರಾದ ನಾಗಯ್ಯಶಾಸ್ತ್ರಿಗಳುಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.
ವಿಜಯಪುರ ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ಎನ್.ಎಂ.ಬಿರಾದಾರ,ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಭೈರಿ ಫೌಂಡೇಶನ್ನ ಡಾ.ನಂದಕುಮಾರ ಭೈರಿ, ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಶಿವಶರಣ ಸಜ್ಜನ ಮಾತನಾಡಿದರು.
ನೂತನ ರಥ ನಿರ್ಮಾಣದ ಶಿಲ್ಪಿಗಳಾದ ಮಾನಪ್ಪ ವಿಶ್ವಕರ್ಮ ಮತ್ತು ಚಂದ್ರಶೇಖರ ಬಡಿಗೇರ ಹಾಗೂ ರಥ ನಿರ್ಮಾಣ ಮತ್ತು ಧಾರ್ಮಿಕ ಕಾರ್ಯಕ್ಕೆ ಸೇವೆ ಸಲ್ಲಿಸಿದ ಭಕ್ತರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.
ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು, ರಾಜುಗೌಡ ಪಾಟೀಲ ಕುದರಿಸಾಲೋಡಗಿ, ಬಿ.ಎಸ್.ಪಾಟೀಲ ಯಾಳಗಿ, ಸುಭಾಷ ಛಾಯಾಗೋಳ, ಎಬಿಡಿ ಫೌಂಡೇಶನ್ನ ಸಂತೋಷ ದೊಡ್ಡಮನಿ, ಬಸನಗೌಡ ಪಾಟೀಲ ಚಬನೂರ, ಡಾ.ನಂದಕುಮಾರ ಭೈರಿ, ಪ್ರಭುಗೌಡ ಬಿರಾದಾರ ಅಸ್ಕಿ, ಶರಣಗೌಡ ಜಂಬೇರಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.