ತಾಂಬಾ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಿಂದಗಿ ಶಾಸಕ ಎಂ.ಸಿ. ಮನಗೂಳಿ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ, ಉಪಾದ್ಯಕ್ಷ ಮತ್ತು ನಿರ್ದೇಶಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ಅನೇಕ ಸಹಕಾರಿ ಸಂಘಗಳು ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಸಮಾಜಮುಖಿಯಾಗಿ ಒಳ್ಳೆಯ ಸಹಕಾರ ನೀಡುತ್ತಿವೆ ಎಂದರು.
ಸಂಘಗಳು ಕೇವಲ ಲಾಭದ ಉದ್ದೇಶ ಹೊಂದಿರದೇ ಸಾರ್ವಜನಿಕರಿಗೆ ಸಹಕಾರಿಯಾಗಿ ಬೆಳೆಯಬೇಕು. ಅಧಿಕಾರದ ಮದ ಯಾರಿಗೂ ಇರಬಾರದು. ನಾವು ಜನರ ಸೇವಕರು ಎಂಬ ಭಾವನೆ ರಾಜಕೀಯ ನಾಯಕರಲ್ಲಿರಬೇಕು. ಮತ ಹಾಕಿದವರೂ ನಮ್ಮವರೇ, ಹಾಕದವರೂ ನಮ್ಮವರೇ. ಚುನಾವಣೆ ನಡೆದಾಗ ಒಂದು ತಿಂಗಳು ಮಾತ್ರ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಜನರ ಅಭಿವೃದ್ಧಿ ಪರ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಚಿಂಚೋಳಿ ಮಾತನಾಡಿ ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಹಿರಿದಾಗಿದೆ. ಆರ್ಥಿಕ, ಸಾಮಾಜಿಕ ರಾಜಕೀಯ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ದಿಯಲ್ಲಿ ಸಹಕಾರ ಅತ್ಯಗತ್ಯ. ಸಹಕಾರಿ ಸಂಘಗಳಲ್ಲಿ ಮಹಿಳೆಯರು ಸ್ತ್ರೀ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ವ್ಯವಹಾರ, ಹೈನುಗಾರಿಕೆ, ವ್ಯಾಪಾರ, ಗೃಹ ಉದ್ಯೋಗ ಮುಂತಾದ ಕೌಶಲ ಅಭಿವೃದ್ದಿ ಕಾರ್ಯಗಳನ್ನು ನಡೆಸುವ ಮೂಲಕ ಅರ್ಥಿಕ ಜೀವನ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಎಲ್ಲರೂ ಸಹಕಾರ ಮನೋಭಾವ ಹೊಂದಿ ಜೀವನದಲ್ಲಿ ಪ್ರಗತಿ ಕಾಣಬೇಕು ಎಂದರು.