ವಿಜಯಪುರ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರು ವೇಗವಾಗಿ ಓದಲು, ಬರೆಯಲು ಅಭ್ಯಾಸ ಮಾಡಿಕೊಳ್ಳಬೇಕು.ಪ್ರಶ್ನೆ ಅರ್ಥಮಾಡಿಕೊಳ್ಳುವಷ್ಟಾದರೂ ಇಂಗ್ಲಿಷ್ ತಿಳಿದುಕೊಂಡಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಎಂದರು.
ಕನಿಷ್ಠ 10 ಸಾವಿರ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕು.ಯುದ್ದಕ್ಕೆ ಹೋಗುವ ಯೋಧನಂತೆ ಎಲ್ಲ ಸಿದ್ಧತೆಗಳೊಂದಿಗೆ ಯುಪಿಎಸ್ಸಿ ಪರೀಕ್ಷೆಗೆ ಶಿಸ್ತಿನ ತಯಾರಾಗಬೇಕು ಎಂದು ಹೇಳಿದರು.
ಮೊದಲು ನಮ್ಮ ಬಗ್ಗೆ ನಾವೇ ನಂಬಿಕೆ ಬೆಳಸಿಕೊಳ್ಳಬೇಕು. ಓದಲು ಆರಂಭಿಸಿದರೆ, ನೆರಳಿನಂತೆ ನಂಬಿಕೆ ನಮ್ಮ ಜೊತೆ ಬರುತ್ತದೆ ಎಂದರು.
ಸ್ವಪ್ರಯತ್ನ ಇದ್ದರೆ ಹಣೆ ಬರಹದಲ್ಲಿ ಬರೆಯದಿದ್ದರೂ, ಬೆವರಿನ ಹನಿಯಿಂದ ಸಾಧನೆ ಮಾಡಬಹುದು. ತರಬೇತಿ ಪಡೆದರೆ ಯಾವಾವ ಪುಸ್ತಕಗಳನ್ನು ಓದಬೇಕು ಎಂಬುದು ತಿಳಿಯುತ್ತದೆ. ಚರ್ಚೆ ಮಾಡಲು ಅವಕಾಶ, ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಪದವಿಯಲ್ಲಿ ಇರುವಾಗಲೇ ಬೇಸಿಕ್ ಕ್ವಾಲಿಟಿ ಬೆಳೆಸಿಕೊಳ್ಳಬೇಕು.ಮತ್ತೊಬ್ಬರು ಬರೆದಿರುವುದನ್ನು ನೋಡಿ ಬರೆಯುವುದು ನೋಟ್ಸ್ ಅಲ್ಲ. ಮೊದಲು ಓದಿ ತಲೆಯಲ್ಲಿ ಇಟ್ಟುಕೊಂಡು, ಸ್ವಂತ ಶಬ್ದಗಳನ್ನು ಬಳಸಿ ಬರೆಯುವುದು ನಿಜವಾದ ನೋಟ್ಸ್. ಸ್ವತ ಸಿದ್ದಪಡಿಸಲಾದ ನೋಟ್ಸ್ ಗಳನ್ನು ಪದೆ ಪದೆ ತಿರುವಿ ಹಾಕಬೇಕು. ನೆನಪು ಹಾರುವುದಿಲ್ಲ ಎಂದರು.