ವಿಜಯಪುರ: ನೀಟ್ ಉತ್ತೀರ್ಣರಾಗಿ ಸರ್ಕಾರಿ ಕೋಟಾದಲ್ಲಿ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್. ಸೀಟು ಸಿಕ್ಕಿದ್ದರೂ ಆರ್ಥಿಕ ಸಂಕಷ್ಟದಿಂದಾಗಿ ಪ್ರವೇಶ ಪಡೆಯಲು ಪರದಾಡುತ್ತಿದ್ದ ರೈತ ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷರಾದ ಬಿ.ಎಲ್.ಡಿ.ಇ. ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ ಹಣಕಾಸು ನೆರವು ನೀಡಿದ್ದಾರೆ.
ತಿಕೋಟಾ ತಾಲ್ಲೂಕಿನ ಹುಬನೂರ ಗ್ರಾಮದ ಚನಬಸು ಮಾಳಿ ಮತ್ತು ಸಿದ್ಧಾಪುರ ಗ್ರಾಮದ ಶೆಮ್ಮಿರ ಜಾತಗಾರ ಎಂ.ಬಿ.ಬಿ.ಎಸ್.ಪ್ರವೇಶ ಪಡೆಯಲು ಹಣಕಾಸಿನ ತೊಂದರೆಯಿಂದಾಗಿ ಪರದಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳ ಪೋಷಕರು ಎಂ.ಬಿ.ಪಾಟೀಲ ಅವರನ್ನು ಭೇಟಿಯಾಗಿ ತಮ್ಮ ಅಳಲು ತೊಡಿಕೊಂಡರು.
ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕರು ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯವಿರುವ ಶುಲ್ಕವನ್ನು ನೀಡುವ ಮೂಲಕ ನೆರವಾಗಿದ್ದಾರೆ.
ತಮ್ಮ ನಿವಾಸಕ್ಕೆ ಭೇಟಿ ನೀಡಿದ ಇಬ್ಬರೂ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್. ಮೊದಲ ವರ್ಷದ ಕಾಲೇಜು ಮತ್ತು ವಸತಿ ನಿಲಯದ ಶುಲ್ಕ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ₹ 4,07,196 ಮೌಲ್ಯದ ಚೆಕ್ ವಿತರಿಸಿದರು.
ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಜಿಲ್ಲೆಯ ಹೆಮ್ಮೆಯನ್ನು ಎತ್ತಿ ಹಿಡಿಯುವಂತೆ ಕಿವಿಮಾತು ಹೇಳಿದರು.
ವಿದ್ಯಾರ್ಥಿ ಸಮ್ಮಿರ ತಂದೆ ಮೆಹಬೂಬ ಜಾತಗಾರ ಮಾತನಾಡಿ, ಕೃಷಿ ಕಾರ್ಮಿಕನಾಗಿರುವ ನನಗೆ ಮಗನನ್ನು ವೈದ್ಯನನ್ನಾಗಿ ಮಾಡಲು ಸಾಧ್ಯವಿರಲಿಲ್ಲ. ನಮ್ಮ ಸಂಕಷ್ಟಕ್ಕೆ ನೆರವಾಗುವ ಮೂಲಕ ಎಂ.ಬಿ.ಪಾಟೀಲರು ಎಂದೂ ಮರೆಯದ ದೊಡ್ಡ ಉಪಕಾರ ಮಾಡಿದ್ದಾರೆ. ಜೀವನಪೂರ್ತಿ ಅವರಿಗೆ ಋಣಿಯಾಗಿರುತ್ತೇವೆ ಎಂದರು.
ಈ ಹಿಂದೆಯೂ ಹಲವಾರು ಜನರಿಗೆ ಎಂ.ಬಿ.ಬಿ.ಎಸ್. ಓದಲು ಸಹಾಯ ಮಾಡಿರುವ ಎಂ.ಬಿ.ಪಾಟೀಲರು ಈಗ ಮತ್ತೆ ಇಬ್ಬರು ಬಡ ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ವಿದ್ಯಾರ್ಥಿ ಚನಬಸು ತಂದೆ ಆನಂದ ಮಾಳಿ, ಬಿ.ಎಲ್.ಡಿ.ಇ. ಡೀಮ್ಡ್ ವಿವಿ ರಿಜಿಸ್ಟ್ರಾರ್ ಡಾ.ಆರ್.ವಿ.ಕುಲಕರ್ಣಿ ಮತ್ತು ಬಿ.ಎಲ್.ಡಿ.ಇ. ಮುಖ್ಯ ಆಡಳಿತಾಧಿಕಾರಿ ಆರ್.ಬಿ.ಕೊಟ್ನಾಳ ಉಪಸ್ಥಿತರಿದ್ದರು.
****
ಸರ್ಕಾರಿ ಶಾಲೆಯಲ್ಲಿ ಓದಿ ವೈದ್ಯನಾಗಬೇಕೆಂಬ ಕನಸು ಕಂಡಿದ್ದ ನನಗೆ ಸುಳ್ಯದ ಮೆಡಿಕಲ್ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಆದರೆ, ಹಣದ ಸಮಸ್ಯೆ ಹಿನ್ನೆಲೆಯಲ್ಲಿ ಪರದಾಡುತ್ತಿದ್ದ ನಮಗೆ ಎಂ.ಬಿ.ಪಾಟೀಲ ದೇವರ ರೂಪದಲ್ಲಿ ನೆರವಾಗಿದ್ದಾರೆ.
–ಚನಬಸು ಮಾಳಿ, ವಿದ್ಯಾರ್ಥಿ
****
ಚಿತ್ರದುರ್ಗದ ಬಸವೇಶ್ವರ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಸೀಟು ಸಿಕ್ಕಿದೆ. ಆದರೆ, ಬಡ ಕುಟುಂಬಕ್ಕೆ ಸೇರಿರುವ ನಮಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈಗ ಎಂ.ಬಿ.ಪಾಟೀಲರು ನೇರವಾಗುವ ಮೂಲಕ ನನ್ನ ಕನಸನ್ನು ನನಸು ಮಾಡುತ್ತಿದ್ದಾರೆ