ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಜೊತೆ ರಾಜಿ ಮಾಡಿಕೊಂಡಿಲ್ಲ. ಆದರೆ, ಪಕ್ಷದ ಸೂಚನೆ ಮೇರೆಗೆ ಅವರೊಂದಿಗಿನ ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ಇಡುತ್ತೇನೆ ಎಂದರು.
ಬಿಎಸ್ ವೈ ಕುರಿತು ನನಗೆ ಪ್ರಶ್ನೆಗಳನ್ನೆ ಕೇಳಬೇಡಿ, ಅವರ ಬಗ್ಗೆ ಅಪಾರ ಗೌರವ ಇದೆ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪಗೆ ಬಯ್ಯೋದು ಬೇಡ ಅವರು ಹಿರಿಯರು ಇದ್ದಾರೆ. ಅವರ ಬಗ್ಗೆ ಮಾತನಾಡಬೇಡಿ ಎಂದು ಹೈಕಮಾಂಡ್ ಸೂಚಿಸಿದೆ ಎಂದರು.
ಚಿಲ್ಲರೆ ರಾಜಕಾರಣಿಗಳ ಬಗ್ಗೆ ಪ್ರತಿಕ್ರಿಯೆ ನೀಡದಂತೆಯೂ ಹೈಕಮಾಂಡ್ ಸೂಚಿಸಿದೆ ಎಂದರು. ಪಕ್ಷದಿಂದ ನನಗೆ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ನೀಡಲಾಗಿದೆ ಎಂಬ ಊಹಾಪೋಹಗಳು ಏಕೆ ಏಳ್ತಿದ್ದಾವೆ ಗೊತ್ತಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದರು.
ವಿಜಯಪುರದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕಾರ್ಯಕ್ರಮಕ್ಕೆ ಗೈರಾದ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ನಾನು ನಡ್ಡಾ ಅವರಿಂದ ಅನುಮತಿ ಪಡೆದೇ ಕಾರ್ಯಕ್ರಮಕ್ಕೆ ಗೈರಾಗಿದ್ದೆ ಎಂದರು.