ವಿಜಯಪುರ: ಜಿಲ್ಲೆಯ ಇಂಡಿ ಲಿಂಬೆಗೆ ಕೇಂದ್ರ ಸರ್ಕಾರದಿಂದ ಭೌಗೋಳಿಕ ಮಾನ್ಯತೆ (ಜಿಯೋಗ್ರಫಿಕಲ್ ಟ್ಯಾಗ್) ಲಭಿಸಿದೆ. ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್’ ಪಡೆದ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ.
‘ಕಾಗ್ಝಿ’ ಲಿಂಬೆ ಎಂದೇ ಪ್ರಸಿದ್ಧವಾದ ‘ಇಂಡಿ ಲಿಂಬೆ’ಗೆ ಭೌಗೋಳಿಕೆ ಮಾನ್ಯತೆ ಲಭಿಸಿರುವುದ ರಿಂದ ‘ಲಿಂಬೆ ಕಣಜ’ ಎಂದೇ ಖ್ಯಾತವಾದ ವಿಜಯಪುರ ಜಿಲ್ಲೆಯ ಲಿಂಬೆ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿದೆ.
‘ಇಂಡಿಯಲ್ಲಿನ ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಮತ್ತು ತೋಟಗಾರಿಕೆ ಇಲಾಖೆ ಜಂಟಿಯಾಗಿ ‘ಇಂಡಿ ಲಿಂಬೆ’ಗೆ ಐಜಿ ಟ್ಯಾಗ್ ಪಡೆಯುವ ಸಂಬಂಧ ಅಧ್ಯಯನ ವರದಿ ತಯಾರಿಸಿ, ಚೆನ್ನೈನಲ್ಲಿರುವ ಕೇಂದ್ರ ಸರ್ಕಾರದ ಜಿಐ ಟ್ಯಾಗ್ ಕಚೇರಿಗೆ 2021ರಲ್ಲಿ ಪ್ರಸ್ತಾವ ಸಲ್ಲಿಸಿತ್ತು. ಕಳೆದ ಮಾರ್ಚ್ 31ಕ್ಕೆ ಐಜಿ ಟ್ಯಾಗ್ ಮಾನ್ಯತೆ ಲಭಿಸಿದ್ದು, ಇದು 2031 ಮಾರ್ಚ್ 25ರವರೆಗೆ ಇರಲಿದೆ’ ಎಂದು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ‘ಕಾಗ್ಜಿ’ ತಳಿಯ ಲಿಂಬೆ ಉತ್ಪಾದನೆ ಹೆಚ್ಚು. ಈ ತಳಿಯ ಹಣ್ಣುಗಳು ದುಂಡಗಿದ್ದು, ಹಣ್ಣಿನ ಸಿಪ್ಪೆ ತೆಳುವಾಗಿರುತ್ತದೆ. ಹಣ್ಣಿನ ರಸ ಹುಳಿಯಾಗಿದ್ದು, ವಿಶಿಷ್ಟ ಸುವಾಸನೆ ಹೊಂದಿದೆ. ಜಿಲ್ಲೆಯ ಒಣ ಹವೆಯು ಲಿಂಬೆ ಬೆಳೆ ಬೆಳೆಯಲು ಸೂಕ್ತವಾಗಿದೆ. ಕಡಿಮೆ ಫಲವತ್ತತೆ ಇರುವ ಜಮೀನಿನಲ್ಲಿ ಕಡಿಮೆ ನೀರಿದ್ದರೂ ಲಿಂಬೆ ಬೆಳೆ ಬೆಳೆಯಬಹುದು.
ಲಿಂಬೆ ವರ್ಷವಿಡೀ ಹೊಸ ಚಿಗುರಿನೊಂದಿಗೆ ಹೂ, ಹಣ್ಣು ಬಿಡುತ್ತದೆ. ಶೇ 40ರಿಂದ 50ರಷ್ಟು ಹೂವು–ಹಣ್ಣು ಮಳೆಗಾಲದಲ್ಲಿ, ಶೇ 30–40ರಷ್ಟು ಸೆಪ್ಟಂಬರ್–ಅಕ್ಟೋಬರ್ನಲ್ಲಿ ಹಾಗೂ ಶೇ 20–25ರಷ್ಟು ಬೇಸಿಗೆಯಲ್ಲಿ ಹೂಗಳನ್ನು ಬಿಡುತ್ತದೆ. ಒಂದು ವರ್ಷದಲ್ಲಿ ಎಕರೆಗೆ 10 ಟನ್ ಇಳುವರಿ ನಿರೀಕ್ಷಿಸಬಹುದು.
‘ಆದಾಯವು ಮಾರುಕಟ್ಟೆಯನ್ನು ಅವಲಂಬಿಸಿದೆ. ಒಂದು ಡಾಗ್ನಲ್ಲಿ (40 ಕೆಜಿ) 1,100 ಲಿಂಬೆ ಹಣ್ಣು ಇರುತ್ತವೆ. ಇದಕ್ಕೆ ಮಳೆಗಾಲ–ಚಳಿಗಾಲದಲ್ಲಿ ದರ ₹ 400ರಿಂದ ₹ 800 ಇರುತ್ತದೆ. ಬೇಸಿಗೆಯಲ್ಲಿ ಒಂದು ಡಾಗ್ಗೆ ದರ ₹ 1,500 ರಿಂದ ₹ 3,500 ಇರುತ್ತದೆ. ವರ್ಷಪೂರ್ತಿ ನಿರಂತರ ಆದಾಯ ಇರುತ್ತದೆ’ ಎಂದು ರೈತರು ಹೇಳುತ್ತಾರೆ.
ರಾಜ್ಯದಲ್ಲಿ 21,660 ಹೆಕ್ಟೇರ್ನಲ್ಲಿ ಲಿಂಬೆ ಬೆಳೆಯಲಾಗುತ್ತಿದ್ದು, 30 ಸಾವಿರ ರೈತರು ಈ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯು ರಾಜ್ಯದ ವಿಸ್ತೀರ್ಣದಲ್ಲಿ ಶೇ 58ರಷ್ಟು (12,220 ಹೆಕ್ಟೆರ್) ಹೊಂದಿದೆ. ಕಲಬುರಗಿ ಎರಡನೇ ಸ್ಥಾನ, ಬಾಗಲಕೋಟೆ ಮೂರನೇ ಮತ್ತು ಬೆಳಗಾವಿ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿವೆ. ವಿಜಯಪುರ ಜಿಲ್ಲೆಯ ಇಂಡಿ (5,500 ಹೆಕ್ಟೇರ್) ಮತ್ತು ಸಿಂದಗಿ(4,500 ಹೆಕ್ಟೇರ್) ತಾಲ್ಲೂಕುಗಳಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಲಿಂಬೆ ಬೆಳೆಯಲಾಗುತ್ತದೆ.
ವಿದೇಶಕ್ಕೂ ರಫ್ತು: ರಾಜ್ಯದಿಂದ ನೆರೆಯ ಬಾಂಗ್ಲಾ ದೇಶ, ನೇಪಾಳ, ದುಬೈ, ಅಬುದಾಬಿ, ಕುವೈತ್, ಶ್ರೀಲಂಕಾ, ಪಾಕಿಸ್ತಾನ ಸೇರಿ 25 ದೇಶಗಳಿಗೆ ಉತ್ಕೃಷ್ಟ ಗುಣಮಟ್ಟದ ಲಿಂಬೆ ರಫ್ತು ಮಾಡಲಾಗುತ್ತಿದೆ.
ಜಿಐ ಟ್ಯಾಗ್ ಲಭಿಸಿರುವುದರಿಂದ ಭವಿಷ್ಯದಲ್ಲಿ ಲಿಂಬೆ ಕೃಷಿ ಮತ್ತಷ್ಟು ಮಹತ್ವ ಪಡೆಯಲಿದೆ. ಉತ್ತಮ ಮಾರುಕಟ್ಟೆ ಬೇಡಿಕೆ ರಫ್ತು ಸೌಲಭ್ಯ ಮುಂತಾದವು ದೊರೆಯುವ ನಿರೀಕ್ಷೆ ಇದೆ.ಸಂತೋಷ ಸಪ್ಪಂಡಿ ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರ
ಇಂಡಿ ಲಿಂಬೆಯ ಇತಿಹಾಸ
‘ವಿಜಯಪುರದ ಆದಿಲ್ಶಾಹಿ ಅರಸರು ಕರ್ಜೂರ ತಂಬಾಕು ಮತ್ತು ಲಿಂಬೆ ಬೆಳೆಯನ್ನು ಕರ್ನಾಟಕಕ್ಕೆ ಪರಿಚಯಿಸಿದ್ದಾರೆ. ಆದರೆ ಲಿಂಬೆ ಬೆಳೆಯನ್ನು ರಾಜ್ಯಕ್ಕೆ ಆದಿಲ್ಶಾಹಿ ಅರಸರೇ ಪರಿಚಯಿಸಿದ್ದು ಎಂಬುದಕ್ಕೆ ಪೂರಕ ಸಾಕ್ಷಾಧಾರಗಳ ಕೊರತೆ ಇದೆ’ ಎಂದು ಕರ್ನಾಟಕ ಲಿಂಬೆ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ ಹೇಳುತ್ತಾರೆ. ಲಿಂಬೆ ಹಾಗೂ ಲಿಂಬೆ ಜಾತಿಗೆ ಸೇರಿದ ಕಿತ್ತಳೆ ಹಾಗೂ ಮೊಸಂಬಿ ಬೆಳೆಗಳ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ ಪ್ರೋತ್ಸಾಹದ ದೃಷ್ಟಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರವು 2017 ಮೇ 16ರಂದು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.