ವಿಜಯಪುರ: ತಂದೆಯಿಲ್ಲದ ಕೊರಗಿನಲ್ಲಿಯೂ ಅಂಗವೈಕಲ್ಯ ಮೆಟ್ಟಿ ನಿಂತು,ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದ ಯುವತಿ ಹಾಗೂ ಕಿರಾಣಿ ಅಂಗಡಿ ಮಾಲೀಕನ ಪುತ್ರಿ ತಲಾ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡು ಸಂಭ್ರಮಿಸಿದರು.
ತೊರವಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ 12ನೇ ಘಟಿಕೋತ್ಸವದ ಆಕರ್ಷಣೆ ಇದು.
20 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಜಮಖಂಡಿ ತಾಲ್ಲೂಕು ಕುಂಚನೂರ ಗ್ರಾಮದ ಸುನಂದಾ ಸಾಹುಕಾರಗೆ ಅಂಗವೈಕಲ್ಯವಿದೆ. ಎಂ.ಎ ಕನ್ನಡ ವಿಷಯದಲ್ಲಿ ಮೂರು ಚಿನ್ನ ಪಡೆದರು.
‘ಚಿಕ್ಕಪ್ಪನ ಆಶ್ರಯದಲ್ಲಿ ಶಿಕ್ಷಣ ಪಡೆದೆ. ಪರಿಶ್ರಮ ಪಟ್ಟು ಓದಿದ್ದರಿಂದ ಚಿನ್ನದ ಪದಕ ಪಡೆಯಲುಸಾಧ್ಯವಾಯಿತು' ಎಂದು ಸುನಂದಾ ಹೇಳಿದರು.
ವಿಜಯಪುರದ ಕಿರಾಣಿ ಅಂಗಡಿ ಮಾಲೀಕರ ಮಗಳಾದ ಅರುಣಾ ಮಹಾಲಿಂಗಪುರ ದೈಹಿಕ ಶಿಕ್ಷಣ ವಿಷಯದಲ್ಲಿ ಮೂರು ಚಿನ್ನದ ಪದಕ ಪಡೆದ್ದಾರೆ.
ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯಲ್ಲಿ ಡಯಟೀಷಿಯನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುಜಾತಾ ಅಲ್ಲಮಪ್ರಭು ಆಹಾರ ಪೂರೈಕೆ ಮತ್ತು ಪೋಷಣೆ ವಿಷಯದಲ್ಲಿ ಮೂರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ಪ್ರಧಾನ
ನಗರದ ಹೊರ ವಲಯ ತೊರವಿ ಬಳಿಯ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡ 12ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋಥ್ ಅವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಡಾ.ಸುಮಾ ಸುಧೀಂದ್ರ (ಸಂಗೀತ) ಮತ್ತು ಕಲ್ಪನಾ ಸರೋಜ್(ಉದ್ಯಮಶೀಲತೆ ಮಹಿಳಾ ಸಬಲೀಕರಣ) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದರು. ಲೇಖಕಿ ವೈದೇಹಿ(ಸಾಹಿತ್ಯ)ಗೈರಾಗಿದ್ದರು.