12ನೇ ಶತಮಾನದಲ್ಲಿ ಕಾಶ್ಮೀರದ ಅರಸು ಮನೆತನದ ನಿಜದೇವಿ ಬಾಲ್ಯದಿಂದಲೂ ಆಧ್ಯಾತ್ಮದ ಸಂಸ್ಕಾರವುಳ್ಳವಳಾಗಿದ್ದಳು. ಆಧ್ಯಾತ್ಮ, ಒಳ್ಳೆಯವರ ಒಡನಾಟದಿಂದ ಆಕೆ ಪಾರಮಾರ್ಥದ ಅರ್ಥವನ್ನು ಅರಿತಿದ್ದಳು. ನಿರ್ಮೊಹದ ತುತ್ತತುದಿಯನ್ನು ತಲುಪಿ, ನಿರ್ವಾಣಾವಸ್ತೆಯಲ್ಲಿದ್ದಳು (ದಿಗಂಬರೆ). ಕಲ್ಯಾಣದ ಕಡೆಗೆ ನಡೆದ ಆಕೆಯ ಪೂಜಾ ನಿಷ್ಠೆಯನ್ನು ಮೆಚ್ಚದ ಶಿವ ಆಕೆಯನ್ನು ಪರೀಕ್ಷಿಸಲು ಸುಂದರ ಯುವಕನ ರೂಪದಲ್ಲಿ ಬಂದು, ನನ್ನನ್ನು ಮದುವೆಯಾಗು ಎಂದು ಬೆನ್ನುಹತ್ತಿದ. ಆದರೆ, ಆಕೆ ತನ್ನಲ್ಲಿರುವ ಆಧ್ಯಾತ್ಮದ ಶಕ್ತಿ, ನಿಜ ವೈರಾಗ್ಯದಿಂದ ದೃಢತೆ ಉಳ್ಳವಳಾಗಿದ್ದಳು. ಹಾಗಾಗಿ, ಶಿವನಿಗೆ ಹೇಳುತ್ತಾಳೆ ನೀನಗೀಗಾಗಲೆ ಗಂಗೆ, ಗೌರಿ ಎಂಬ ಇಬ್ಬರು ಹೆಂಡಿರಿದ್ದಾರೆ ಮತ್ತೆ ನನ್ನೆಕೆ ಆಸೆ ಪಡುತ್ತಿರುವೇ?ಇದನ್ನು ನಮ್ಮ ಕಲ್ಯಾಣದ ಶರಣರು ನೋಡಿದರೆ ಗಹಗಹಿಸಿ ನಗುತ್ತಾರೆ ಎಂದು ಉತ್ತರಿಸಿದಾಗ ಶಿವ ಆಕೆಯ ನಿಸ್ವಾರ್ಥ ನಿಲುವಿಗೆ ಸೋತು, ನಿರ್ವಾಣಾವಸ್ತೆಯಲ್ಲಿ ಕಲ್ಯಾಣಕ್ಕೆ ಹೊರಟ ಆಕೆಯನ್ನು ನೋಡಿ ಶರಣರು ಅನ್ಯತಾ ಭಾವಿಸದಿರಲೆಂದು ಬೊಂತೆಯನ್ನು (ಕೌದಿ) ನೀಡುತ್ತಾನೆ. ಆಗ ಆಕೆ ಕಲ್ಯಾಣವನ್ನು ಸೇರಿ ಬೊಂತಾದೇವಿಯಾಗಿ ‘ಮಹಾ ಮಾನವರ’ ಸಾಲಿಗೆ ಸೇರುತ್ತಾಳೆ.